ಶಿಕಾರಿಪುರ: ಪಟ್ಟಣದ ಕಾನೂರು ಕಡೇಕೇರಿ ಬಳಿ ಆ.19ರಂದು ಪ್ರತಿಷ್ಠಾಪಿಸಲು ಉದ್ದೇಶಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ ಕಾರಣ ಶನಿವಾರ ಪ್ರತಿಮೆಯನ್ನು ಇಲ್ಲಿಯೇ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಅಭಿಮಾನಿಯೊಬ್ಬ ಕೈಯಲ್ಲಿ ಚಾಕು ಹಿಡಿದು ಆತ್ಮಹತ್ಯೆ ಯತ್ನಿಸಿದರು. ಹಲವು ಗಂಟೆಗಳ ಕಾಲ ಚಾಕು ಹಿಡಿದು ನಿಂತಿದ್ದರು
ಕಾನೂರು ಕಡೇಕೇರಿ ಬಳಿ ಪ್ರತಿಮೆ ಸ್ಥಾಪಿಸಲು ಶುಕ್ರವಾರ ರಾತ್ರಿ ವಿವಿಧ ಸಂಘಟನೆಗಳು ಪ್ರತಿಮೆಯನ್ನು ತಂದು ನಿಲ್ಲಿಸಿದ್ದವು. ಆದರೆ ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲ ಎಂದುರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ದೂರು ನೀಡಿದ್ದರು. ದೂರಿನ ಕಾರಣ ಪೊಲೀಸರು ಹಾಗೂಪುರಸಭೆ ಅಧಿಕಾರಿಗಳು ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ಶನಿವಾರ ಮತ್ತೆ ಸೇರಿದ ಕುರುಬ ಸಮಾಜದ ಮುಖಂಡರು ಹಾಗೂ ವಿವಿಧ ಸಮುದಾಯದವರು ಪ್ರತಿಭಟನೆ ನಡೆಸಿದರು.
ಈ ವೇಳೆ ರಾಯಣ್ಣ ಅಭಿಮಾನಿ ನಗರದ ಅಶೋಕ್ ಅವರು, ‘ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಇದೇ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ನನ್ನ ಜೀವ ಬಲಿಕೊಡುತ್ತೇನೆ’ ಎಂದು ಚಾಕು ಹಿಡಿದು ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ.ಪಿ. ಕವಿರಾಜ್, ‘ಇದೇ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲು ಪುರಸಭೆಗೆ ಮನವಿ ಸಲ್ಲಿಸಬೇಕು. ಸದಸ್ಯರು ನಿರ್ಣಯ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಕಳಿಸಲು ತಿಳಿಸುತ್ತೇನೆ’ ಎಂದು ಭರವಸೆ ನೀಡಿದರು.
ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್, ಮುಖಂಡರಾದ ನಗರದ ಮಹಾದೇವಪ್ಪ, ಗೋಣಿ ಮಾಲತೇಶ್, ಕಬಾಡಿ ರಾಜಪ್ಪ, ಎಸ್.ಪಿ. ನಾಗರಾಜ್ ಗೌಡ್ರು, ಗೋಣಿಪ್ರಕಾಶ್ ಇದ್ದರು.