ಶಿವಮೊಗ್ಗ: ಇನ್ನು ಮುಂದೆ ಮೊಬೈಲ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ದೊರೆಯುವ ಸೇವಾ ಸೌಲಭ್ಯಗಳು ಸಿಗಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಸರ್ಕಾರಿ ಸಂಘದ ನೌಕರರ ಭವನದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಆತಿಥ್ಯ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇನ್ನೂ ನಾಲ್ಕೈದು ತಿಂಗಳಲ್ಲಿ ಆನ್ಲೈನ್ನಲ್ಲಿ ನೌಕರರ ಮೆಡಿಕಲ್ ಸೌಲಭ್ಯ, ಪಾಸ್ಪೋರ್ಟ್ ಸೌಲಭ್ಯಗಳು, ಚೆಕ್ಲಿಸ್ಟ್ ಸೌಲಭ್ಯಗಳು ಸೇರಿ ಅನೇಕ ಸೇವೆಗಳು ದೊರೆಯಲಿದೆ. ಇದರಿಂದ ನೌಕರರ ಸಮಯ ಉಳಿತಾಯ ಹಾಗೂ ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರವನ್ನೂ ತಡೆಯುವಂತಾಗಲಿದೆ ಎಂದರು.
ಉಪನ್ಯಾಸಕರ ಬೇಡಿಕೆಯಾದ ಕುಮಾರ ನಾಯ್ಕ್ ವರದಿ ಅನುಷ್ಠಾನ, ವರ್ಗಾವಣೆ ಮೊದಲಾದ ಬೇಡಿಕೆ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ‘ವಿದ್ಯಾಗಮ ಯೋಜನೆ ಅವೈಜ್ಞಾನಿಕವಾಗಿದ್ದು, ಅನೇಕ ಜನ ಶಿಕ್ಷಕರು ಯೋಜನೆಯಿಂದ ಕೊರೊನಾಗೆ ಒಳಗಾಗಿದ್ದಾರೆ’ ಎಂದು ದೂರಿದರು.
ಈಗಾಗಲೇ ಶಾಲೆಗಳಿಗೆ ಅ.30 ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಆದರೆ ಶಿಕ್ಷಕರಿಗೆ ಅ.20ರ ನಂತರ ರಜೆ ಘೋಷಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಅನ್ಯಾಯ ಸಹಿಸಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಅತಿಥಿ ಉಪನ್ಯಾಸಕರಿಗೆ ಸಹಾಯಧನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.