ಶಿವಮೊಗ್ಗ: ಮಧುಮೇಹಿಗಳ ಸಂಖ್ಯೆ ಹೆಚ್ಚಲು ಜನರು ಅನುಸರಿಸುತ್ತಿರುವ ಜೀವನ ಶೈಲಿಯೇ ಮುಖ್ಯ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದರು.
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಭಾನುವಾರ ಶಿವಮೊಗ್ಗ ಮಿಡ್ಟೌನ್ ರೋಟರಿ ಡಯಾಬಿಟಿಸ್ ಸೆಲ್ಫ್ ಕೇರ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ‘ಆರೋಗ್ಯಕ್ಕಾಗಿ ನಡಿಗೆ’ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಮಧುಮೇಹ ತಡೆಗಟ್ಟಬಹುದು. ಮಧುಮೇಹ ಕಾಯಿಲೆಗೆ ಸಂಬಂಧಿಸಿ ವೈದ್ಯರಿಂದ ಮಾರ್ಗದರ್ಶನ ಪಡೆದು ಔಷಧಗಳನ್ನು ತೆಗೆದುಕೊಳ್ಳಬೇಕು. ವೈದ್ಯರ ಮಾರ್ಗದರ್ಶನದಂತೆ ಜೀವನ ಶೈಲಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ರಕ್ತನಿಧಿ ಕೇಂದ್ರದಿಂದ ನೆಹರೂ ಕ್ರೀಡಾಂಗಣದವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ರೋಟರಿ ಮಿಡ್ಟೌನ್ ಅಧ್ಯಕ್ಷ ಡಿ.ಎಸ್. ಅರುಣ್, ರಾಜೇಂದ್ರ ಪ್ರಸಾದ್, ಹರ್ಷಕಾಮತ್, ಡಾ.ಶಿವರಾಮಕೃಷ್ಣ, ಜಿ.ಎನ್.ಎನ್. ಮೂರ್ತಿ, ಅನಿಲ್, ಜಿ. ವಿಜಯ್ಕುಮಾರ್ ಜಾಥಾದಲ್ಲಿ ಪಾಲ್ಗೊಂಡಿದ್ದರು.