ಸಾಗರ: ಮನುಷ್ಯನ ದೈಹಿಕ, ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಹಿರಿಯ ಷಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀನಾಥ್ ಹೇಳಿದರು.
ಇಲ್ಲಿನ ಸಾಗರ ಷಟಲ್ ಬ್ಯಾಡ್ಮಿಂಟನ್ ಕ್ಲಬ್, ಕ್ಲಬ್ ಮಾನ್ಸೂನ್ ಆಶ್ರಯದಲ್ಲಿ ಕ್ಲಬ್ ಮಾನ್ಸೂನ್ ಅಂಕಣದಲ್ಲಿ ಶನಿವಾರ ಆರಂಭಗೊಂಡ ರಾಜ್ಯಮಟ್ಟದ ಆಹ್ವಾನಿತ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸತತ ಪರಿಶ್ರಮ, ಅಭ್ಯಾಸ, ಶ್ರದ್ಧೆ ತೋರಿದಲ್ಲಿ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಅಲ್ಪಾವಧಿಯ ಅಭ್ಯಾಸದಿಂದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಓದಿಗೆ ತೊಂದರೆಯಾಗುತ್ತದೆ ಎಂಬ ಭಾವನೆ ಸರಿಯಲ್ಲ ಎಂದರು.
ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ, ‘ರಾಜ್ಯಮಟ್ಟದಲ್ಲಿ ಡಬಲ್ಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, 20ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿವೆ’ ಎಂದು ತಿಳಿಸಿದರು.
ಗಜಾನನ ಸಾರಿಗೆ ಸಂಸ್ಥೆಯ ಮನು, ಮೆಸ್ಕಾಂನ ಹುಚ್ಚರಾಯಪ್ಪ, ನಂದೀಶ್, ಪ್ರಾಯೋಜಕರಾದ ಸಲೀಂ, ದೀಪಕ್, ಸುಜಯ್ ಇದ್ದರು.