ಶಿವಮೊಗ್ಗ: ಕಾನು ಅರಣ್ಯ ಖಾಸಗಿ ಪಾಲಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧಿಕಾರಿಗಳಿಗೆ ಸೂಚಿಸಿದರು.
ಸಾಗರ ತಾಲ್ಲೂಕಿನ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಜೀವ ವೈವಿಧ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಕಾನು ಅರಣ್ಯ, ಡೀಮ್ಡ್ ಅರಣ್ಯ ಪ್ರದೇಶಗಳನ್ನು ಕಬಳಿಸುವ ಕೆಲಸ ನಡೆಯುತ್ತಿದೆ. ಇಂತಹ ಹಲವು ದೂರುಗಳು ಮಂಡಳಿ ಮುಂದೆ ಬಂದಿವೆ. ಮಲೆನಾಡಿನ ಜನರ ಬದುಕಿನ ಭಾಗವಾದ ಇಂತಹ ಅರಣ್ಯಗಳನ್ನು ಪಟ್ಟಭದ್ರರು ವಶಕ್ಕೆ ಪಡೆಯಲು ಅವಕಾಶ ನೀಡಬಾರದು ಎಂದರು.
ಆನಂದಪುರ ಸಮೀಪ ಗಂಟಿಕೊಪ್ಪ, ಅಡೂರು ಕಾನು ಅರಣ್ಯಗಳನ್ನು ಖಾಸಗಿ ಪಾಲಾಗುವುದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಬಳಿಕ ವಿವಿಧ ಇಲಾಖೆ ಅಧಿಕಾರಿಗಳ ಜತೆ ಗಂಟಿಕೊಪ್ಪ ಮತ್ತು ಅಡೂರು, ಇರುವಕ್ಕಿ ಕಾನು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
‘150 ಎಕರೆ ಪ್ರದೇಶದಲ್ಲಿ ಬಹು ಅಪರೂಪದ ಭಾರಿ ಗಾತ್ರದ 15 ಸಾವಿರ ಮರಗಳು ಈ ಪ್ರದೇಶದಲ್ಲಿ ಇವೆ. ಇವು ಪಾರಂಪರಿಕ ವೃಕ್ಷಗಳಾಗಿದ್ದು, ಅವುಗಳನ್ನು ಪಾರಂಪರಿಕ ಜೈವಿಕ ಕಾನು ಎಂದು ಗುರುತಿಸಲಾಯಿತು’ ಎಂದು ಅಶೀಸರ ತಿಳಿಸಿದರು.
ಬಳಿಕ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಗ್ರಾಮ ಪಂಚಾಯಿತಿ ಜೀವ ವೈವಿಧ್ಯ ಮಂಡಳಿ ಸಮಿತಿ ಸಭೆಯಲ್ಲೂ ಗ್ರಾಮಸ್ಥರು ಗ್ರಾಮದ ಕೆರೆ, ಹಳ್ಳ, ಅರಣ್ಯ ಪ್ರದೇಶ, ಗೋಮಾಳ ಒಟ್ಟು 74 ಎಕರೆ ಜಾಗವನ್ನು ಖಾಸಗಿಯವರು ಕಬಳಿಕೆ ಮಾಡದಂತೆ ತಡೆಯಬೇಕು ಎಂದು ಮನವಿ ಮಾಡಿದರು.
ತಕ್ಷಣ ಸಂಪೂರ್ಣ ಮಾಹಿತಿ ಪಡೆದು ಕಾನು ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಶೀಸರ ಅವರು ತೀರ್ಥಹಳ್ಳಿ ತಹಶೀಲ್ದಾರ್ಗೆ ಸೂಚಿಸಿದರು.