ಶಿವಮೊಗ್ಗ: ಇಲ್ಲಿನ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಅನುಮಾನಾಸ್ಪದವಾಗಿ ಇಟ್ಟಿದ್ದ ಎರಡು ಕಬ್ಬಿಣದ ಬಾಕ್ಸ್ಗಳಲ್ಲಿ ಹಳೆಯ ಅನುಪಯುಕ್ತ ವಸ್ತುಗಳು ಹಾಗೂ ಬಿಳಿ ಬಣ್ಣದ ಪುಡಿ ಪತ್ತೆಯಾಗಿದೆ. ಇದರಿಂದ ಸ್ಥಳದಲ್ಲಿ ಭಾನುವಾರ ಬೆಳಿಗ್ಗೆಯಿಂದ ಸೃಷ್ಟಿಯಾಗಿದ್ದ ಆತಂಕದ ವಾತಾವರಣಕ್ಕೆ ತೆರೆಬಿದ್ದಿದೆ.
ಬೆಂಗಳೂರಿನಿಂದ ರಾತ್ರಿ ಬಾಂಬ್ ವಿಲೇವಾರಿ ತಂಡ ಬಂದಿದ್ದು, ಅದರ ಕಾರ್ಯಾಚರಣೆಗೆ ಸತತವಾಗಿ ಸುರಿದ ಮಳೆ ಅಡ್ಡಿಪಡಿಸಿತು.
ಬೆಳಗಿನ ಜಾವ 4 ಗಂಟೆ ವೇಳೆಗೆ ಬಾಕ್ಸ್ಗಳ ಬೀಗ ಸ್ಫೋಟಿಸಿದ ಬಾಂಬ್ ವಿಲೇವಾರಿ ತಂಡದವರು ಅದನ್ನು ತೆಗೆದಾಗ ಈ ವಸ್ತುಗಳು ಪತ್ತೆಯಾಗಿವೆ. ಬಿಳಿ ಪುಡಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಳಿ ಬಣ್ಣದ ಪುಡಿ ಉಪ್ಪು?: ಬಾಕ್ಸ್ ಇಟ್ಟಿದ್ದ ಇಬ್ಬರನ್ನು ತಿಪಟೂರಿನಲ್ಲಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಪೆಟ್ಟಿಗೆಯಲ್ಲಿ ಉಪ್ಪು ತುಂಬಿ ಇಟ್ಟಿರುವುದಾಗಿ ತಿಳಿಸಿದ್ದರು ಎಂದು ತಿಳಿದುಬಂದಿದೆ. ಹಣಕಾಸಿನ ವಂಚನೆ ಪ್ರಕರಣದಲ್ಲಿ ಬಾಕ್ಸ್ ಗಳು ಬಳಕೆಯಾಗಿದ್ದು, ಅವುಗಳಲ್ಲಿ ನೋಟು ತಂಬಿರುವುದಾಗಿ ನಂಬಿಸಲು ತೂಕ ಹೆಚ್ಚಾಗಲಿ ಎಂದು ಉಪ್ಪು ತುಂಬಿದ್ದರು ಎನ್ನಲಾಗಿದೆ, ವಂಚನೆ ಯತ್ನ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.