ಸೊರಬ: ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರತಿ ವರ್ಷದಂತೆ ಅವರ ಅಭಿಮಾನಿಗಳಿಗೆ ತೆಂಗಿನ ಸಸಿ ವಿತರಿಸುವ ಕಾರ್ಯಕ್ರಮ ಹಾಗೂ ಬಂಗಾರಪ್ಪ ಅಭಿಮಾನಿಗಳ ಆಸೆಯಂತೆ ಸ್ಮರಣ ಮಂದಿರದ ಪ್ರಾರಂಭೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಡಿ.26ರಂದು ಪಟ್ಟಣದ ಬಂಗಾರಧಾಮದಲ್ಲಿ ಏರ್ಪಡಿಸ ಲಾಗಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶ ಕಂಡ ಅಪರೂಪದ ಜಾತ್ಯತೀತ, ಸಮಾಜವಾದಿ ಮತ್ತು ಸ್ವಾಭಿಮಾನದ ವ್ಯಕ್ತಿ ಬಂಗಾರಪ್ಪ ಅವರ ಆದರ್ಶ ರಾಜಕಾರಣವನ್ನು ತಾವು ಬಾಲ್ಯದಲ್ಲಿಯೇ ಮೈಗೂಡಿಸಿ ಕೊಂಡಿದ್ದೇನೆ. ದೀನ ದಲಿತರ ಪರ ಅವರು ಹೊಂದಿದ್ದ ಕಾಳಜಿಯನ್ನು ಅವರ ಮಗನಾಗಿ ಮುಂದುವರಿಸಿ ಕೊಂಡು ಹೋಗಲು ಇಂಥ ಕಾರ್ಯಕ್ರಮ ಆಯೋಜಿಸ ಲಾಗಿದೆ’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ತಾಲ್ಲೂಕಿನ ಬಂಗಾರಪ್ಪ ಅವರ ಪ್ರೀತಿ ಪಾತ್ರರು ಹಾಗು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ನಟ ಶಿವರಾಜ್ ಕುಮಾರ್ ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಎಚ್.ಗಣಪತಿ, ವಕ್ತಾರ ಎಂ,ಡಿ. ಶೇಖರ್, ಶ್ರೀಪಾದ ಹೆಗಡೆ ನಿಸರಾಣಿ ಹಾಜರಿದ್ದರು.