ತುರುವೇಕೆರೆ: ತಾಲ್ಲೂಕಿನ 11 ಸೊಸೈಟಿಗಳಿಗೆ ಸುಮಾರು ₹15 ಕೋಟಿ ಹೊಸ ಸಾಲವನ್ನು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಂಜೂರು ಮಾಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಎಂ.ಸಿದ್ದಲಿಂಗಪ್ಪ ತಿಳಿಸಿದರು.
ತಾಲ್ಲೂಕಿನ ಕೊಡಗೀಹಳ್ಳಿ ಪ್ರಾಥಮಿಕ ಕೃಷಿ ಸಹಕಾರ ಸಂಘ ಏರ್ಪಡಿಸಿದ್ದ ಸಂಘದ ಸದಸ್ಯರಿಗೆ ಕೆಸಿಸಿ ಬೆಳೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಪತ್ತಿನ ಸಹಕಾರ ಸಂಘಗಳು ಸಾಲ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಹಾಗು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಸಂಘದ ಸದಸ್ಯರಿಗೆ ನೆರವಾಗಲೆಂದು ಕೆಸಿಸಿ ಸಾಲ ನೀಡುವಂತೆ ರಾಜಣ್ಣ ಅವರಿಗೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಾಲ ಮಂಜೂರು ಮಾಡಿದ್ದಾರೆ. ಅದರಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕೊಡಗೀಹಳ್ಳಿ ಪಿಎಸಿಎಸ್ಗೆ ಸಿಂಹಪಾಲು ಸಾಲ ಲಭಿಸಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಎನ್.ಶರತ್ ಕುಮಾರ್ ಮಾತನಾಡಿ, ಸಂಘದ 326 ಸಣ್ಣ ಹಾಗೂ ಅತಿಸಣ್ಣ ರೈತರಿಗೆ ₹1.14 ಕೆಸಿಸಿ ಬೆಳೆಸಾಲ ನೀಡಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷ ಎಸ್.ಪಿ.ವೆಂಕಟೇಶ್, ನಿರ್ದೇಶಕರಾದ ದಿನೇಶ್ಬಾಬು, ಸಿದ್ದಯ್ಯ, ಪಾಂಡುರಂಗಯ್ಯ, ದೇವರಾಜು, ಸೆಕ್ರೇಟರಿ ಶಿವಕುಮಾರ್, ಗ್ರಾ.ಪಂ.ಸದಸ್ಯ ಕಿರಣ್, ರುದ್ರೇಶ್, ಸಿಬ್ಬಂದಿ ಹರೀಶ್, ದ್ರಾಕ್ಷಾಯಿಣಿ, ಮಹದೇವಯ್ಯ ಇದ್ದರು.