ಚಿಕ್ಕನಾಯಕನಹಳ್ಳಿ: ಕೊರೊನಾ ಲಕ್ಷಣಗಳು ಕಂಡು ಬಂದಾಗ ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗುವುದು. ಆ ಭಾಗದ ಜನರು ಸರ್ಕಾರದ ಮುನ್ನೆಚ್ಚರಿಕೆಯ ಕ್ರಮಕ್ಕೆ ಸಹಕರಿಸದಿದ್ದರೆ ಯಾರೇ ಆಗಲಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಎಚ್ಚರಿಸಿದರು.
ತಾಲ್ಲೂಕಿನಲ್ಲಿ ಕೊರೊನಾ ಪ್ರಕರಗಳು ಹೆಚ್ಚಿರುವ ಗೋಡೆಕೆರೆ ಗೊಲ್ಲರಹಟ್ಟಿಗೆ ಭೇಟಿ ನೀಡಿ ಗ್ರಾಮಸ್ಥರ ಬಳಿ ಮಾತನಾಡಿದರು.
ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಒಂದೇ ದಿನ 5 ಪ್ರಕರಣಗಳು ಕಂಡು ಬಂದಿದ್ದವು. ಸೋಂಕಿತರ ಕರೆ ತರಲು ತಹಶೀಲ್ದಾರ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಆಗ ಸೋಂಕಿತರು ತಹಶೀಲ್ದಾರ್ ವಿರುದ್ದ ಮಾತನಾಡಿದ್ದರು. ಈ ವಿಷಯವನ್ನು ತಹಶೀಲ್ದಾರರು ಸಚಿವರ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.
ಈ ಬಗ್ಗೆ ಗ್ರಾಮದಲ್ಲಿ ತಿಳಿವಳಿಕೆ ನೀಡಲು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಡಿಎಚ್ಒ ನಾಗೇಂದ್ರಪ್ಪ, ತಿಪಟೂರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಜೊತೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು.