ಶಿರಾ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಗೆ ಯೋಜನಾಬದ್ಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೈಲಾ ನಾಗರಾಜ್ ಹೇಳಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ನನಗೆ ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಗೌರವವಿದೆ. ನಾಡು, ನುಡಿಯ ಸೇವೆ ಮಾಡಲು ನನ್ನನ್ನು ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು’ ಮನವಿ ಮಾಡಿದರು.
ಕನ್ನಡ ಭವನ ಇಲ್ಲದ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಭವನ ನಿರ್ಮಾಣದ ಜೊತೆಗೆ ಹೋಬಳಿ ಕೇಂದ್ರಗಳಲ್ಲಿ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಬಯಲುಸೀಮೆಯ ರಂಗಾಯಣವನ್ನು ತುಮಕೂರಿಗೆ ತರಲು ಶ್ರಮಿಸಲಾಗುವುದು. ಜಿಲ್ಲೆಯ ಕಲೆ, ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ, ಸಿನಿಮಾ ಮಾಧ್ಯಮಗಳ ಪೂರ್ಣ ಮಾಹಿತಿ ಒಳಗೊಂಡ ಕಲಾ ಗ್ಯಾಲರಿಯನ್ನು ಜನಪ್ರತಿನಿಧಿಗಳು ಹಾಗೂ ಸಮಾನ ಮನಸ್ಕರ ಜೊತೆ ಸೇರಿ ನಿರ್ಮಿಸಲಾಗುವುದು ಎಂದರು.