ಪಾವಗಡ: ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ಶನೈಶ್ಚರ ದೇಗುಲದಲ್ಲಿ ಸಕಲ ಸಿದ್ಧತೆ ನಡೆದಿದೆ.
ಶನೈಶ್ಚರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ವೃತ್ತದ ಬಳಿ ಈಗಾಗಲೇ ವ್ಯಾಪಾರಿಗಳು ಮಳಿಗೆ ಹಾಕಿಕೊಂಡಿದ್ದಾರೆ. ಪಾದಾಚಾರಿ ರಸ್ತೆಗಳಲ್ಲಿ, ರಸ್ತೆ ವಿಭಜಕಗಳ ಬಳಿ ಅಂಗಡಿ ಹಾಕಲು ವ್ಯಾಪಾರಿಗಳು ತಮ್ಮದೇ ಶೈಲಿಯಲ್ಲಿ ಸ್ಥಳ ನಿಗದಿಪಡಿಸಿಕೊಂಡಿದ್ದಾರೆ.
ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ರಾಜ್ಯಗಳಿಂದ ಭಕ್ತರು ಬರುವುದರಿಂದ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ವಾಹನ ದಟ್ಟಣೆ ನಿಯಂತ್ರಿಸಲು ಸಿದ್ಧತೆ ನಡೆಸಿದೆ.
ಸೆಪ್ಟಂಬರ್- 14ರವರೆಗೆ ವಿಶೇಷ ಪೂಜಾಕೈಂಕರ್ಯ ನಡೆಯಲಿದ್ದು, ಬರುವ ಭಕ್ತರಿಗಾಗಿ ಎಸ್ಎಸ್ಕೆ ಸಂಘದಿಂದ ಮೂಲ ಸೌಕರ್ಯ ಕಲ್ಪಿಸಲು ಶುಕ್ರವಾರ ತಯಾರಿ ನಡೆಸಲಾಯಿತು.
ಆಗಸ್ಟ್-19ರಂದು ಬೆಳಿಗ್ಗೆ 4 ಗಂಟೆಗೆ ತೈಲಾದಿ ಅಭಿಷೇಕ, ನವಗ್ರಹ ಪೂಜೆ, ರಾತ್ರಿ 7.30ಕ್ಕೆ ವಿಶೇಷ ಉತ್ಸವ ನಡೆಯಲಿದೆ.