ಕುಣಿಗಲ್ (ತುಮಕೂರು): ಮತದಾರರಿಗೆ ಹಂಚಲಾದ ಕುಕ್ಕರ್ ತನಗೆ ಸಿಕ್ಕಿಲ್ಲ ಎಂದು ಕೇಳಿದ ವೃದ್ಧೆಯ ಮೇಲೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ ಬುಧವಾರ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.
ಹಲ್ಲೆಗೆ ಒಳಗಾಗಿದ್ದಾರೆ ಎಂದು ಹೇಳಲಾದ ಉಜ್ಜನಿ ಗ್ರಾಮದ ಗಂಗಚಂದ್ರಮ್ಮ(75) ಅವರ ಮಗ ಶಿವಕುಮಾರ್, ಸ್ಥಳೀಯ ಕಾಂಗ್ರೆಸ್ ಮುಖಂಡ ನಾರಾಯಣ ಎಂಬುವರ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹದಿನೈದು ದಿನದ ಹಿಂದೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಉಜ್ಜನಿ ಗ್ರಾಮದಲ್ಲಿ ಮತದಾರರಿಗೆ ಕುಕ್ಕರ್ ಹಂಚಲಾಗಿತ್ತು. ಆಗ ಮಗಳ ಮನೆಗೆ ಹೋಗಿದ್ದ ಗಂಗಚಂದ್ರಮ್ಮ ಹದಿನೈದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದರು. ಬುಧವಾರ ಮನೆಯ ಮುಂದೆ ಕುಳಿತಿದ್ದ ಅವರು, ಬೈಕ್ನಲ್ಲಿ ಹೊರಟಿದ್ದ ಮುಖಂಡನನ್ನು ‘ನನಗೆ ಯಾಕೆ ಕುಕ್ಕರ್ ನೀಡಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಆತ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿದ್ದಾನೆ. ಸ್ಥಳೀಯರು ನನ್ನ ತಾಯಿಯನ್ನು ರಕ್ಷಿಸಿದ್ದಾರೆ ಎಂದು ಶಿವಕುಮಾರ್ ದೂರಿನಲ್ಲಿ ಹೇಳಿದ್ದಾರೆ. ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಚಂದ್ರಗಂಗಮ್ಮನವರಿಗೆ ಚಿಕಿತ್ಸೆ ಕೊಡಿಸಲಾಗಿದೆ.