ಕುಣಿಗಲ್: ತಾಲ್ಲೂಕಿನಲ್ಲಿ ಶಾಸಕ ಡಾ.ರಂಗನಾಥ್, ಬಗರ್ ಹುಕುಂ ಸಾಗುವಳಿ ಸಮಿತಿ ಮತ್ತು ತಹಶೀಲ್ದಾರ್ ಅವರ ನಿರ್ಲಕ್ಷ್ಯದಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ರೈತ ಘಟಕದ ಅಧ್ಯಕ್ಷ ಕರಿಗೌಡ ಬೀಚನಹಳ್ಳಿ ಆರೋಪಿಸಿದರು.
ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ಪಕ್ಷದ ಬೆಂಬಲಿಗರ ನಾಮಿನಿ ಸಮಿತಿ ರಚನೆಯಾಗಿದ್ದರೂ ಶಾಸಕ ರಂಗನಾಥ್, ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯ ರೊಂದಿಗೆ ಸಮನ್ವಯತೆ ಕೊರತೆಯಿಂದ ಸಭೆಗಳನ್ನು ನಡೆಸದೆ ಕಾಲಹರಣ ಮಾಡಿದ್ದಾರೆ ಎಂದು ಹೇಳಿದರು.
ಅಧಿಕಾರಾವಧಿ ಮುಗಿಯುತ್ತಿರುವ ಸಮಯದಲ್ಲಿ ಬಿಜೆಪಿ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಇದರ ಪರಿಣಾಮ ಸಾಗುವಳಿ ಚೀಟಿ ವಿತರಣೆಯೂ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ದೂರಿದರು.
ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದಾಗ ಅರಣ್ಯ ಇಲಾಖೆಯೊಂದಿಗೆ ಜಂಟಿ ಸರ್ವೆ ಮಾಡಲು ಆದೇಶ ನೀಡಿದ್ದರು. ಆದರೆ, ತಹಶೀಲ್ದಾರ್ ನಿರ್ಲಕ್ಷ್ಯ ತೋರಿದ ಪರಿಣಾಮ ರೈತರಿಗೆ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಪಕ್ಷದ ಅಭ್ಯರ್ಥಿ ಎಚ್.ಎ. ಜಯ ರಾಮಯ್ಯ, ತಾಲ್ಲೂಕಿನಲ್ಲಿ ಹೇಮಾ ವತಿ ನಾಲಾ ಯೋಜನೆಯು ಅಧಿಕಾರಿ ಗಳು, ಜನಪ್ರತಿನಿಧಿಗಳ ಮತ್ತು ಗುತ್ತಿಗೆದಾರರ ಜೇಬು ತುಂಬುವ ಯೋಜನೆಯಾಗಿದೆ. ನಾಲೆಗಾಗಿ ಜಮೀನು ಕಳೆದುಕೊಂಡಿ ರುವ ಬಹುತೇಕ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ದೂರಿದರು.
ನೀರಿನ ಆಸೆಗಾಗಿ ಜಮೀನು ಕಳೆದುಕೊಂಡವರಿಗೆ ಈ ಕಡೆ ನೀರು ಇಲ್ಲ, ಮತ್ತೊಂದೆಡೆ ಪರಿಹಾರವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗ ಏತ ನೀರಾವರಿಗೆ ಜಮೀನು ಕಳೆದುಕೊಂಡವರಿಗೆ ₹ 10 ಕೋಟಿ ಪರಿಹಾರ ಧನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳಾದ ಶಿವಲಿಂಗಯ್ಯ, ಗಿರೀಶ್, ಕುಮಾರ್, ರಾಜಣ್ಣ, ಪುನೀತ್ ಗೌಡ, ಮಹೇಶ್ ಇದ್ದರು.