ಕೊಡಿಗೇನಹಳ್ಳಿ: ಹೋಬಳಿಯ ಕಲಿದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ 49ಕ್ಕೆ ಏರಿದ್ದ ಸೋಂಕಿತರ ಸಂಖ್ಯೆ ಕೋವಿಡ್ ಕಾರ್ಯಪಡೆಯ ಪರಿಶ್ರಮದಿಂದಾಗಿ 10ಕ್ಕೆ ಇಳಿದಿದೆ.
ಪಿಡಿಒ ಆರ್. ಹರೀಶ್ ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾದಾಗ ನಮಗೆಲ್ಲ ಆತಂಕದ ಉಂಟಾಯಿತು. ಹಾಗಾಗಿ, ಈ ಕಠಿಣ ಪರಿಸ್ಥಿತಿ ಎದುರಿಸಲು ಕಾರ್ಯಪಡೆ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಐಸೋಲೇಶನ್ನಲ್ಲಿರುವ ಸೋಂಕಿತರ ಮನೆಗಳಿಗೆ ಭೇಟಿ ನೀಡಿದೆವು. ಅವರು ಎಲ್ಲೂ ಓಡಾಡದಂತೆ ಮತ್ತು ಅವರಿಗೆ ಬೇಕಾದ ಅಗತ್ಯ ವಸ್ತುಗಳು, ಮೆಡಿಕಲ್ ಕಿಟ್ ಒದಗಿಸುವ ಜವಾಬ್ದಾರಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಒಪ್ಪಿಸಲಾಯಿತು. ಇದರಿಂದ ನಿಯಂತ್ರಣಕ್ಕೆ ಬಂದಿದೆ ಎಂದರು.
ಉಪ ತಹಶೀಲ್ದಾರ್ ನವೀನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುಮತಿ, ಉಪಾಧ್ಯಕ್ಷ ಎ. ನಾರಾಯಣಸ್ವಾಮಿ, ಆರೋಗ್ಯ ಸಹಾಯಕಿಯರಾದ ಜಿ.ಎಂ. ವನಜಾಕ್ಷಿ, ಹರಿಣಿಶ್ರೀ, ಗ್ರಾಮ ಲೆಕ್ಕಿಗರಾದ ಮಹೇಶ್, ಗಂಗರಾಜು, ಅಂಜನಮೂರ್ತಿ ಇದ್ದರು.