ಕೊರಟಗೆರೆ: ತಾಲ್ಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಕೇಳಿದ ತಾಲ್ಲೂಕಿನ ರಾಯವಾರದ ಯೋಧ ಗೋವಿಂದರಾಜು(30) ಮೇಲೆ ಐವರು ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.
ತಾಲ್ಲೂಕಿನ ಅರಸಾಪುರದ ಭರತ್ (29), ಮಧುಗಿರಿ ತಾಲ್ಲೂಕಿನ ಕೊಡಗದಾಲದ ಪುನೀತ (32), ಹುಣಸವಾಡಿಯ ಗೌರಿಶಂಕರ (32), ಶಿವಾ (32), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್ (35) ಹಲ್ಲೆ ಮಾಡಿರುವ ಆರೋಪಿಗಳು. ಪುನೀತ ಹಾಗೂ ಭರತ್ನನ್ನು ಪೊಲೀಸರು ಬಂಧಿಸಿದ್ದು, ಮೂವರು ಯುವಕರು ತಲೆ ಮರೆಸಿಕೊಂಡಿದ್ದಾರೆ.
ಗೋವಿಂದರಾಜು ಜಮ್ಮುಕಾಶ್ಮಿರದ ಭಾರತೀಯ ಭೂಸೇನೆ ಸಿಪಾಯಿಯಾಗಿ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಯ ಮೇಲೆ ಊರಿಗೆ ಬಂದಿದ್ದರು. ಕೆಲಸದ ನಿಮಿತ್ತ ಬೇರೇನಹಳ್ಳಿ ಕ್ರಾಸ್ಗೆ ಹೋಗಿದ್ದರು. ಈ ವೇಳೆ ಯುವಕರ ಗುಂಪೊಂದು ದಾರಿಗೆ ಅಡ್ಡಲಾಗಿ ನಿಂತಿದ್ದರು. ದಾರಿ ಬಿಡಿವಂತೆ ಗೋವಿಂದರಾಜು ಯುವಕರನ್ನು ಕೇಳಿದ್ದಾರೆ. ಕುಡಿದ ಮತ್ತಲ್ಲಿದ್ದ ಯುವಕರು ಕ್ಯಾತೆ ತೆಗೆದು ಮದ್ಯದ ಬಾಟಲಿಯಿಂದ ಗೋವಿಂದರಾಜು ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಗೋವಿಂದರಾಜು ಚಿಕಿತ್ಸೆ ಪಡೆಯುತ್ತಿದ್ದಾರೆ.