ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ, ಮಾನವೀಯತೆ ಕುಸಿತ

Published 7 ಏಪ್ರಿಲ್ 2024, 4:44 IST
Last Updated 7 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ತುಮಕೂರು: ಅಧಿಕಾರದ ಒತ್ತಡಗಳಿಗೆ ಸಿಲುಕಿ ಪ್ರಾಮಾಣಿಕತೆ, ಮೌಲ್ಯ, ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಯಂತ ಕುಮಾರ್ ವಿಷಾದಿಸಿದರು.

ತುಮಕೂರು ವಿ.ವಿ ಶನಿವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗ ಉದ್ಘಾಟಿಸಿ ಮಾತನಾಡಿ, ‘ಮಾನವೀಯ ಮೌಲ್ಯಗಳಿಗೆ ಬೆಲೆ ಕಟ್ಟಿದಾಗ ಬದುಕಿನ ಮೌಲ್ಯಗಳು ಕುಸಿಯುತ್ತವೆ. ಸಮಗ್ರತೆಯನ್ನು ಸಾಧಿಸುವ ಬದುಕನ್ನು ತೊರೆದು, ನೀತಿ, ನಿಯಮ, ಮಾನವೀಯ ಮೌಲ್ಯಗಳನ್ನು ಮರೆತು ಅಶಿಸ್ತಿನಿಂದ ಬದುಕುತ್ತಿದ್ದೇವೆ’ ಎಂದರು.

ಕೇವಲ ಮಾಹಿತಿ ಪಡೆಯುವ ವಿದ್ಯೆಗಿಂತ ಅರಿವು, ಅನುಭವಕ್ಕೆ ಬರುವ ವಿದ್ಯೆಯನ್ನು ವಿದ್ಯಾರ್ಥಿಗಳು ಕಲಿಯಬೇಕು. ಪರಿಸರ, ಸಮಾಜದ ನೋವು, ಅಸಮಾಧಾನ, ಸಮಸ್ಯೆಗಳನ್ನು ಆಲಿಸಿದರೆ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ವಿದ್ಯೆಯ ರೂಪದಲ್ಲಿ ನಮ್ಮನ್ನು ತಲುಪಲಿವೆ ಎಂದು ಸಲಹೆ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ, ‘ನ್ಯಾಯಾಧೀಶರು ತೀರ್ಪು ಪ್ರಕಟಿಸುವ ಬದಲು, ನ್ಯಾಯ ಒದಗಿಸಬೇಕು. ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ವಚನವೇ ಇಂದಿನ ಕಾನೂನು ಅಧ್ಯಯನದ ಪುಸ್ತಕಗಳಾಗಿವೆ ಎಂದು ಹೇಳಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಜ್ಞಾನ ಅಧ್ಯಯನದಿಂದ ಸಿಗುತ್ತದೆ. ಮೌಲ್ಯಗಳು ಅನುಭವದಿಂದ ಬರುತ್ತವೆ. ಶಿಕ್ಷಕರಿಂದ ಮೌಲ್ಯಾಧಾರಿತ ಶಿಕ್ಷಣ ಸಿಗುವುದು ಅಪರೂಪವಾಗಿದೆ’ ಎಂದು ನುಡಿದರು.

ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ.ಮೋಹನ್ ರಾಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್, ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT