ಗುಬ್ಬಿ: ಬೇಸಿಗೆ ಸಮೀಪಿಸುತ್ತಿದ್ದರೂ ಕುಡಿಯುವ ನೀರಿಗೆ ಕ್ರಮಕೈಗೊಳ್ಳದ ಗ್ರಾಮ ಪಂಚಾಯಿತಿ ವಿರುದ್ಧ ಎಸ್. ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥಪುರ ಹಾಗೂ ಮರಾಠಿ ಪಾಳ್ಯದ ಗ್ರಾಮಸ್ಥರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕೊಳವೆ ಬಾವಿಯ ಮೋಟರ್ ಸುಟ್ಟುಹೋಗಿದ್ದು, ಅಧಿಕಾರಿಗಳು ತುರ್ತುಕ್ರಮ ಕೈಗೊಳ್ಳದಿರುವುದರಿಂದ ಕುಡಿಯುವ ನೀರಿಗೆ ಪರದಾಡುವಂತಾಗುತ್ತಿದೆ. ಕೆರೆ, ಕಟ್ಟೆಗಳಲ್ಲಿಯೂ ನೀರು ಇಲ್ಲವಾಗಿದ್ದು, ಜಾನುವಾರುಗಳಿಗೆ ನೀರಿನ ಕೊರತೆ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ಯಾಂಕರ್ ಮೂಲಕ ವ್ಯವಸ್ಥಿತವಾಗಿ ಸರಬರಾಜು ಮಾಡದ ಅಧಿಕಾರಿಗಳು ದಿನವಿಡೀ ನೀರಿಗಾಗಿಯೇ ಕಾಯುವಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಪ್ರತಿಕ್ರಿಯಿಸಿ, ಸುಟ್ಟು ಹೋಗಿರುವ ಕೊಳವೆ ಬಾವಿಯ ಮೋಟರ್ ದುರಸ್ತಿಗೆ ಕೊಡಲಾಗಿದೆ. ಅವರು ಹಿಂದಿರುಗಿಸುವುದು ತಡವಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿಯ ಅರಿವು ಗ್ರಾಮಸ್ಥರಿಗೆ ಇದ್ದರೂ ಪ್ರತಿಭಟನೆಗೆ ಮುಂದಾಗಿರುವುದು ದುರಾದೃಷ್ಟಕರ. ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಬದ್ಧರಾಗಿದ್ದೇವೆ. ವಾಸ್ತವ ಅರಿತು ಗ್ರಾಮಸ್ಥರು ಸಹಕರಿಸಿದಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಸಾಧ್ಯ ಎಂದರು.