ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಸಂಸದ ಜಿ.ಎಸ್.ಬಸವರಾಜು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ‘ದೇಶದಲ್ಲಿ ಶೇ 80 ರಷ್ಟಿರುವ ರೈತರ ಬದುಕು ಇಂದು ಶೋಚನೀಯವಾಗಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯಬೇಕು. ಇಲ್ಲವೇ ಸರ್ಕಾರವೇ ಉತ್ಪನ್ನ ಖರೀದಿಸಿ, ಮಾರಾಟ ಮಾಡುವಂತಹ ವ್ಯವಸ್ಥೆ ರೂಪಿಸಬೇಕು. ರೈತರನ್ನು ಸಂಕಷ್ಟದಿಂದ ತಪ್ಪಿಸಲು ಸರ್ಕಾರವೇ ಮುಂದೆ ನಿಂತು ರೈತರ ಬೆಳೆಗಳನ್ನು ಖರೀದಿಸಬೇಕು’ ಎಂದು ಒತ್ತಾಯಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಶತಮಾನಗಳ ಇತಿಹಾಸವಿದೆ. ರೈತರಿಗೆ ಅಗತ್ಯ ಮಾಹಿತಿಯ ಜತೆಗೆ ಕೃಷಿಯ ಭಾಗವಾಗಿರುವ ಜಾನುವಾರುಗಳ ಕೊಡು–ಕೊಳ್ಳುವಿಕೆಗೆ ಸಿದ್ಧಗಂಗಾ ಜಾತ್ರೆ ಒಂದು ವೇದಿಕೆಯಾಗಿದೆ. ಶಿಕ್ಷಣದ ಜತೆಗೆ ಮಾಹಿತಿ ಮತ್ತು ಮನರಂಜನೆ ಒದಗಿಸುವುದು ವಸ್ತು ಪ್ರದರ್ಶನದ ಮೂಲ ಉದ್ದೇಶ’ ಎಂದರು.
ಶಾಸಕ ಬಿ.ಸುರೇಶ್ಗೌಡ, ‘ರೈತರು ಮತ್ತು ಯುವ ಉದ್ದಿಮೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಈ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. ಶಿಕ್ಷಣದ ಜತೆಗೆ ಬಡವರ ಅಭಿವೃದ್ಧಿಗೆ ಒತ್ತು ನೀಡಿರುವ ಮಠದ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬಂದಿದೆ’ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ.ಅಶ್ವಿಜ, ನಿವೃತ್ತ ಐಎಎಸ್ ಅಧಿಕಾರಿ ಪ್ರಭುದೇವ್, ಅಕ್ಕ ಅಮೆರಿಕ ಸಂಸ್ಥೆಯ ರವಿ, ವಿಶ್ವಾಮಿತ್ರ ಇತರರು ಹಾಜರಿದ್ದರು.