ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ದಾಖಲಾತಿ, ಮೂಲಸೌಕರ್ಯ ಕೊರತೆಯಿಂದ ಮುಚ್ಚಿದ ಶಾಲೆ: ಆಸ್ತಿ ರಕ್ಷಣೆಯೇ ಸವಾಲು

Published 18 ಡಿಸೆಂಬರ್ 2023, 6:22 IST
Last Updated 18 ಡಿಸೆಂಬರ್ 2023, 6:22 IST
ಅಕ್ಷರ ಗಾತ್ರ

ತುರುವೇಕೆರೆ: ಮಕ್ಕಳ ದಾಖಲಾತಿ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ತಾಲ್ಲೂಕಿನ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಮುಚ್ಚಿದ ಶಾಲೆಗಳ ಕಟ್ಟಡ ಮತ್ತು ಅದರ ಆಸ್ತಿ ರಕ್ಷಣೆ ಸವಾಲಾಗಿ ಪರಿಣಮಿಸಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕಿನಲ್ಲಿ 83 ಹಿರಿಯ ಪ್ರಾಥಮಿಕ, 176 ಕಿರಿಯ ಪ್ರಾಥಮಿಕ ಸೇರಿದಂತೆ ಒಟ್ಟು 250 ಶಾಲೆಗಳಿವೆ.

ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲು ಹಾಜರಾತಿ ಕೊರತೆ ಪ್ರಮುಖ ಕಾರಣವಾದರೂ ಕೆಲವೆಡೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಶಾಲೆಗಳಿಗೆ ಬಾಗಿಲು ಹಾಕಲಾಗಿದೆ. ಮುಚ್ಚಿದ ಶಾಲೆಗಳ ಕೊಠಡಿ, ಶಾಲಾ ಪರಿಕರ ಮತ್ತು ಅದರ ಆಸ್ತಿ, ಪಾಸ್ತಿಗಳಿಗೆ ಸೂಕ್ತ ರಕ್ಷಣೆ, ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ ಮುಚ್ಚುತ್ತಿರುವ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ಸಂಖ್ಯೆಯೇ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಎಲ್‌ಕೆಜಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗುತ್ತಿದೆ.

ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿಷಯ ಶಿಕ್ಷಕರು ಇಲ್ಲದಿರುವುದು, ಮಕ್ಕಳು ಶಾಲೆಗೆ ಹೋಗಿ ಬರಲು ಸಂಚಾರದ ತೊಡಕು, ಶಾಲೆಗಳಲ್ಲಿ ಸೌಲಭ್ಯದ ಕೊರತೆ, ಬೋಧನಾ ಗುಣಮಟ್ಟದಲ್ಲಿನ ಕುಸಿತದ ಕಾರಣವೊಡ್ಡಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

2023-24ನೇ ಸಾಲಿನಲ್ಲಿ ತಾಲ್ಲೂಕಿನ ಅಮ್ಮಸಂದ್ರದ ಆದಿತ್ಯಪಟ್ಟಣ, ಆನೆಕೆರೆ ಕ್ಲಸ್ಟರ್ನ ಸೋಮೇನಹಳ್ಳಿ ಮತ್ತು ಸೋಮೇನಹಳ್ಳಿ ಪಾಳ್ಯಾ, ಭೈತರ ಹೊಸಹಳ್ಳಿ ಕ್ಲಸ್ಟರ್‌ನ ವರಾಯಸಂದ್ರ, ಕಣತೂರು ಕ್ಲಸ್ಟರ್‌ನ ಚಂದ್ರಾಪುರ, ಲೋಕಮ್ಮನಹಳ್ಳಿ ಕ್ಲಸ್ಟರ್‌ನ ಗಂಗನಹಳ್ಳಿ, ಮಾವಿನಕೆರೆ ಕ್ಲಸ್ಟರ್‌ನ ಬ್ಯಾಡರಹಳ್ಳಿ, ಮುನಿಯೂರು ಕ್ಲಸ್ಟರ್‌ನ ಮಾದಾಪಟ್ಟಣ, ಸಂಪಿಗೆ ಹೊಸಹಳ್ಳಿ ಕ್ಲಸ್ಟರ್‌ನ ಹಳೇ ಸಂಪಿಗೆ, ತುರುವೇಕೆರೆ ಪಟ್ಟಣದ ಡಿ.ಕಲ್ಕೆರೆ ಉರ್ದು ಪ್ರಾಥಮಿಕ ಶಾಲೆಗಳು ಮುಚ್ಚಿವೆ.

ಮುಚ್ಚಿರುವ ಬಹುಪಾಲು ಶಾಲಾ ಆವರಣದೊಳಗೆ ಕಸ, ಕಡ್ಡಿ ಬಿದ್ದು ತಿಪ್ಪೆಗುಂಡಿಗಳಾಗಿವೆ. ಚಾವಣಿ ಮೇಲೆ ಮಳೆನೀರು ನಿಂತು ಶಿಥಿಲಗೊಂಡಿವೆ.  ಕಾಂಪೌಂಡ್‌ ಇಲ್ಲದ ಶಾಲೆಗಳಲ್ಲಿ ಖಾಸಗಿಯವರ ಹಸ್ತಕ್ಷೇಪವೂ ನಡೆಯುತ್ತಿದೆ. ಹಾಳಾಗುತ್ತಿರುವ ಸರ್ಕಾರಿ ಶಾಲೆ ಕಟ್ಟಡಗಳನ್ನು ಸೂಕ್ತ ರೀತಿಯಲ್ಲಿ ನರ್ವಹಿಸಬೇಕು ಎನ್ನುತ್ತಾರೆ ಸ್ಥಳೀಯರು.

ಸಿದ್ದಲಿಂಗೇಗೌಡ
ಸಿದ್ದಲಿಂಗೇಗೌಡ
ಸರ್ಕಾರ ಸುಪರ್ದಿಗೆ ಪಡೆಯಲಿ
ತಾಲ್ಲೂಕಿನಲ್ಲಿ ಮುಚ್ಚಿರುವ ಶಾಲೆಗಳಲ್ಲಿ ದನಕರು ಕಟ್ಟುವುದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆ. ಕುಡುಕರು ಜೂಜುಕೋರರ ಅಡ್ಡೆಗಳಾಗಿ ಸರ್ಕಾರದ ಆಸ್ತಿ ಹಾಳಾಗುತ್ತಿದೆ. ಎಲ್ಲವನ್ನೂ ಸರ್ಕಾರ ಸುಪರ್ದಿಗೆ ತೆಗೆದುಕೊಂಡು ರಕ್ಷಿಸಬೇಕು. ಜಿಲ್ಲಾ ಉಪನಿರ್ದೇಶಕರು ಬಿಇಒ ಬಿಆರ್‌ಪಿ ಸಿಆರ್‌ಪಿ ಶಿಕ್ಷಕರು ಮುಚ್ಚಿರುವ ಶಾಲೆಗಳನ್ನು ತೆರೆಯಲು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಬೇಕು. ಸಿದ್ದಲಿಂಗೇಗೌಡ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಮುಚ್ಚಿರುವ ಶಾಲೆ ತೆರೆಯಲಿ ಕಡಿಮೆ ಮಕ್ಕಳಿವೆ ಎಂಬ ಕಾರಣಕ್ಕೆ ಶಾಲೆಗೆ ಶಿಕ್ಷಕರನ್ನು ಸರ್ಕಾರ ನೇಮಿಸದ ಕಾರಣ ಗ್ರಾಮದಲ್ಲಿನ ಶಾಲೆ ಮುಚ್ಚಿ ವರ್ಷವಾಗಿದೆ. ಇಲ್ಲಿರುವ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಕಿರಿಯ ಪ್ರಾಥಮಿಕ ಶಾಲೆಗೆ ಏಳೆಂಟು ಕಿ.ಮೀ ದೂರದ ಮಾಯಸಂದ್ರ ಅಥವಾ ಮಾವಿನಿಕೆರೆ ಶಾಲೆಗೆ ಹೋಗಬೇಕಿದೆ. ಗ್ರಾಮದ ಮಕ್ಕಳ ಹಿತದೃಷ್ಟಿಯಿಂದ ಮುಚ್ಚಿರುವ ಶಾಲೆ ಮತ್ತೆ ತೆರೆಯಲಿ. ಅಶೋಕ ಬ್ಯಾಡರಹಳ್ಳಿ ಅಂಗನವಾಡಿ ಗ್ರಂಥಾಲಯಕ್ಕೆ ಬಳಕೆ ಮಕ್ಕಳ ಕೊರತೆಯ ಕಾರಣದಿಂದ ತಾತ್ಕಾಲಿಕವಾಗಿ ಮುಚ್ಚಿದ ಶಾಲೆಗಳನ್ನು ಮುಂದಿನ ದಿನಗಳಲ್ಲಿ ತೆರೆಯಲಾಗುವುದು. ಮುಚ್ಚಿರುವ ಶಾಲೆಗಳ ವಸ್ತುಸ್ಥಿತಿ ಬಗ್ಗೆ ಸಿಆರ್‌ಪಿಗಳ ಮೂಲಕ ಮಾಹಿತಿ ಪಡೆದು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಂಗನವಾಡಿ ಗ್ರಂಥಾಲಯಕ್ಕೆ ಬಳಸಲು ಅವಕಾಶ ನೀಡುವುದರ ಮೂಲಕ ಶಾಲೆ ಆಸ್ತಿ ರಕ್ಷಿಸಲಾಗುವುದು. ಎನ್.ಸೋಮಶೇಖರ್ ಬಿಇಒ

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT