ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಮಾರ್ಗೋನಹಳ್ಳಿ ಗ್ರಾಮದ ರೈತ ಸಿದ್ದಯ್ಯ(90) ತೆಂಗಿನ ಸಸಿಗೆ ತಗುಲಿದ್ದ ಬೆಂಕಿ ನಂದಿಸುವಾಗ ಆಕಸ್ಮಿಕವಾಗಿ ಬೆಂಕಿ ಅವಪಘಡಕ್ಕೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿದ್ದಯ್ಯ ಭಾನುವಾರ ಸಂಜೆ ದೊಡ್ಡಮಾರ್ಗೋನಹಳ್ಳಿ ಹೊರ ವಲಯದ ತೋಟಕ್ಕೆ ತೆರಳಿದ್ದಾರೆ. ಬದುವಿನಲ್ಲಿದ್ದ ಹುಲ್ಲಿಗೆ ಬೆಂಕಿ ಹಾಕಿದ್ದಾರೆ. ಬೆಂಕಿ ಕ್ರಮೇಣ ಬದುವಿನ ಪಕ್ಕದಲ್ಲಿದ್ದ ತೆಂಗಿನ ಸಸಿಗೆ ಆವರಿಸಿದೆ. ನಂದಿಸುವಾಗ ಸಿದ್ದಯ್ಯ ಅವರಿಗೂ ಬೆಂಕಿಯ ಜ್ವಾಲೆ ರಾಚಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಕ್ಕಪಕ್ಕದ ತೋಟದವರು ಸಿದ್ದಯ್ಯ ಬೆಂಕಿಯಲ್ಲಿ ಬಿದ್ದಿರುವುದನ್ನು ಕಂಡು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಸಂಗಮೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.