ತಿಪಟೂರು: ಇಲ್ಲಿನ ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಪ್ರತಿ ಹರಾಜಿಗೂ ಕುಸಿಯುತ್ತಲೇ ಸಾಗಿದ್ದು, ನಾಫೆಡ್ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಕೂಗು ರೈತರಿಂದ ಪ್ರಬಲವಾಗುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ 26 ಸಾವಿರ ಕ್ವಿಂಟಲ್ ಕೊಬ್ಬರಿ ದಾಸ್ತಾನಿದ್ದು, ಇದು ಬೆಲೆಯನ್ನು ಮತ್ತಷ್ಟು ತಗ್ಗಿಸುವ ಆತಂಕ ಮೂಡಿಸಿದೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶಕ್ಕೆ ಕೊಬ್ಬರಿ ರವಾನೆ ಆಗುತ್ತಿಲ್ಲ. ಈ ಕಾರಣದಿಂದ ಬೆಲೆ ಮತ್ತಷ್ಟು ಕುಸಿಯುತ್ತದೆ ಎನ್ನುವ ಮಾತುಗಳು ಎಪಿಎಂಸಿ ಅಂಗಳದಲ್ಲಿ ಕೇಳಿಬರುತ್ತಿದೆ.
ಬುಧವಾರ ಮತ್ತು ಶನಿವಾರ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು (ಟೆಂಡರ್) ನಡೆಯುತ್ತದೆ. ಒಂದು ತಿಂಗಳಿನಿಂದ ಬೆಲೆ ಇಳಿಯುತ್ತಲೇ ಸಾಗಿದೆ. ಬೆಂಬಲ ಬೆಲೆ ಕ್ವಿಂಟಲ್ಗೆ ₹10,300 ಇದೆ. ಈ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಹರಾಜು ನಡೆದಿದೆ. ಬೆಂಬಲ ಬೆಲೆಗಿಂತ ಒಳಕ್ಕೆ ಬಂದರೆ ತಕ್ಷಣ ನಾಫೆಡ್ ಕೇಂದ್ರ ತೆರೆದು ಖರೀದಿ ಆರಂಭಿಸಬೇಕಿದೆ.
ಲಾಕ್ಡೌನ್ಗೆ ಮುನ್ನ ಕ್ವಿಂಟಲ್ ₹ 10,500 ಧಾರಣೆ ಇತ್ತು. ಪುನಃ ಖರೀದಿ ಆರಂಭವಾದಾಗ ₹ 11,200ಕ್ಕೆ ಏರಿಕೆ ಆಯಿತು. ಇದರಿಂದ ರೈತರಲ್ಲಿ ಸಂತಸ ಮೂಡಿತ್ತು. ಇನ್ನೂ ಬೆಲೆ ಏರಿಕೆ ಆಗಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಆದರೆ ಧಾರಣೆ ಕುಸಿಯುತ್ತಲೇ ಸಾಗಿದೆ.
ಲಾಕ್ಡೌನ್ ನಂತರದ 46 ಸಾವಿರ ಕ್ವಿಂಟಲ್ ಮಾರುಕಟ್ಟೆಗೆ ಬಂದಿದೆ. ಹೊರರಾಜ್ಯಗಳಿಗೆ 20 ಸಾವಿರ ಕ್ವಿಂಟಲ್ ರವಾನೆ ಆಗಿದೆ. 26 ಸಾವಿರ ಕ್ವಿಂಟಲ್ ಇನ್ನೂ ಮಾರುಕಟ್ಟೆಯಲ್ಲೇ ದಾಸ್ತಾನಿದೆ. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸಾಕಷ್ಟು ರೈತರು ಕೊಬ್ಬರಿ ಸುಲಿಯದೆ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಹೆಚ್ಚು ದಿನ ಸುಲಿಯದೆ ಇದ್ದರೆ ತೂಕ ಕಡಿಮೆ ಆಗುವ ಆತಂಕವೂ ಇದೆ. ಸಣ್ಣ, ಮಧ್ಯಮ ರೈತರು ಬದುಕು ನಡೆಸಲು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.