ಗುಬ್ಬಿ: ಕಳೆದ ಬಾರಿ ಅತಿವೃಷ್ಟಿಯಾಗಿ ಬೆಳೆಯಾಗದಿದ್ದರೆ, ಈ ಬಾರಿ ಅನಾವೃಷ್ಟಿಯಿಂದ ಬೆಳೆ ಇಲ್ಲವಾಗಿದೆ. ಇದರಿಂದಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿ ಜಾನುವಾರುಗಳ ಮೇವಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚು ರೈತರು ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸ್ಥಳೀಯವಾಗಿ ಮೇವು ದೊರಕದ ಕಾರಣ ಹೊರ ಜಿಲ್ಲೆಗಳಿಗೆ ಹೋಗುವಂತಾಗಿದೆ.
ಮೇವಿಗಾಗಿ ರಾಗಿ, ಜೋಳಗಳನ್ನೇ ನಂಬಿಕೊಂಡಿದ್ದ ರೈತರಿಗೆ ಮೇವಿನ ಬರದ ಬಿಸಿ ತಟ್ಟಿದೆ. ಕಳೆದ ಬಾರಿ ಒಂದು ಪೆಂಡಿ ಹುಲ್ಲಿಗೆ ₹150 ರಿಂದ ₹200 ಇದ್ದರೆ, ಈ ಬಾರಿ ₹350 ರಿಂದ ₹400 ಕೊಟ್ಟರೂ ಮೇವು ಸಿಗುತ್ತಿಲ್ಲ ಎಂದು ರೈತ ಕುಮಾರಸ್ವಾಮಿ ಹೇಳಿದರು.
ಯಾವ ಕಡೆಯೂ ಮಳೆ ಆಗದೇ ಇರುವುದರಿಂದ ಮೇವನ್ನು ಎಲ್ಲಿಂದ ತರುವುದು ಎಂಬ ಆತಂಕ ಕಾಡುತ್ತಿದೆ ಎನ್ನುತ್ತಾರೆ ರೈತ ಚಂದ್ರಶೇಖರ್.
ಬೆಸ್ಕಾಂ ಇಲಾಖೆ ರೈತರಿಗೆ ನಿಯಮಾನುಸಾರ ವಿದ್ಯುತ್ತನ್ನು ಸರಬರಾಜು ಮಾಡಿದರೆ ಜೋಳವನ್ನಾದರೂ ಬೆಳೆದು ರಾಸುಗಳನ್ನು ಉಳಿಸಿಕೊಳ್ಳಬಹುದು. ಆದರೆ ಯಾವಾಗ ವಿದ್ಯುತ್ ಕೊಡುವರೋ, ತೆಗೆಯುವರೋ ಒಂದು ತಿಳಿಯುತ್ತಿಲ್ಲ ಎನ್ನುತ್ತಾರೆ ರೈತ ರಮೇಶ್.
ಸರ್ಕಾರ ಶೀಘ್ರವಾಗಿ ಗೋದಾಮಗಳನ್ನು ತೆರೆಯಬೇಕು. ರೈತರಿಗೆ ಅಗತ್ಯವಿರುವ ಮೇವನ್ನು ಪೂರೈಸಬೇಕು ಎನ್ನುತ್ತಾರೆ ರೈತರು.