ಹುಳಿಯಾರು: ರಸ್ತೆ ಅಪಘಾತದಿಂದಾಗಿ ನಿಧನರಾದ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರ ಪಂಚನಹಳ್ಳಿಗೆ ತೆರಳುವ ಮಾರ್ಗಮಧ್ಯೆ ಪಟ್ಟಣದಲ್ಲಿ ನೂರಾರು ಜನರು ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 1 ಗಂಟೆಗೆ ಪಾರ್ಥಿವ ಶರೀರ ಬರುವ ಮುನ್ಸೂಚನೆಯಿಂದ 12 ಗಂಟೆಯಿಂದಲೇ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಹುಳಿಯಾರು ಪೊಲೀಸ್ ಠಾಣೆ ವೃತ್ತದಲ್ಲಿ ಕಾದು ನಿಂತಿದ್ದರು. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರಿಂದ ಎಲ್ಲಿರಿಗೂ ಅವಕಾಶ ಕಲ್ಪಿಸುವುದು ಕಷ್ಟವಾಯಿತು.
ನೀನಾಸಂ ಸತೀಶ್ ಮಾತನಾಡಿ, ನಿಗದಿತ ಸಮಯಕ್ಕೆ ಅಂತಿಮ ಸಂಸ್ಕಾರ ಮುಗಿಸಬೇಕಾಗಿರುವುದರಿಂದ ಕೇವಲ 5 ನಿಮಿಷ ಅವಕಾಶ ನೀಡುತ್ತೇವೆ. ಒಬ್ಬರು ಮಾತ್ರ ದರ್ಶನ ಪಡೆದು ಎಲ್ಲರೂ ನಿಂತಲ್ಲಿಯೇ ಅಂತಿಮ ನಮನ ಸಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಕೂಡ ಪಾರ್ಥಿವ ಶರೀರದೊಟ್ಟಿಗೆ ಹುಳಿಯಾರಿಗೆ ಬಂದಿದ್ದರು.
ಹೋಬಳಿಯ ಹೊಯ್ಸಳಕಟ್ಟೆ ಗೇಟ್ನಲ್ಲಿಯೂ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರಕ್ಕೆ ಅಂತಿನ ನಮನ ಸಲ್ಲಿಸಲಾಯಿತು.