ತುಮಕೂರು: ಲಾಕ್ಡೌನ್ ಅವಧಿಯಲ್ಲಿ ರಾಜ್ಯದ ಸೇರಿದಂತೆ ಜಿಲ್ಲೆಯ ಹೂ ಬೆಳೆಗಾರರಿಗೆ ಹೆಚ್ಚಿನ ನಷ್ಟವಾಯಿತು. ಯಾವುದೇ ಶುಭ ಸಮಾರಂಭಗಳು, ಕಾರ್ಯಕ್ರಮಗಳು ಇಲ್ಲದ ಕಾರಣ ಹೂಗಳು ತೋಟಗಳಲ್ಲಿಯೇ ಕೊಳೆತು ಹಾಳಾಗಿದ್ದವು.
ಹೀಗೆ ನಷ್ಟಕ್ಕೆ ತುತ್ತಾದ ಹೂ ಬೆಳೆಗಾರರಿಗೆ ರಾಜ್ಯ ಸರ್ಕಾರ ಒಂದು ಹೆಕ್ಟೇರ್ ಮಿತಿಯಲ್ಲಿ ಗರಿಷ್ಠ ₹ 25 ಸಾವಿರ ಪರಿಹಾರ ಧನ ನೀಡಲು ಮುಂದಾಯಿತು. ಹೀಗೆ ಜಿಲ್ಲೆಯಲ್ಲಿ 2,043 ರೈತರ ಖಾತೆಗಳಿಗೆ ನೇರವಾಗಿ ₹96.23 ಲಕ್ಷ ಜಮೆಯಾಗಿದೆ. ಜಿಲ್ಲೆಯಲ್ಲಿ ಅಂದಾಜು 1,322 ಎಕರೆಯಲ್ಲಿ ಬೆಳೆದಿದ್ದ ಹೂಗಳು ಹಾನಿಗೀಡಾಗಿದ್ದವು. ಸದ್ಯ ಜಿಲ್ಲೆಯಲ್ಲಿ 384.92 ಹೆಕ್ಟೇರ್ ಪ್ರದೇಶದ ಬೆಳೆಗೆ ಸರ್ಕಾರದಿಂದ ಪರಿಹಾರ ಧನ ದೊರೆತಿದೆ.
ಪಾವಗಡ, ಶಿರಾ ಮತ್ತು ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನದಾಗಿ ಹೂ ಬೆಳೆಯಲಾಗುತ್ತದೆ. ಈ ತಾಲ್ಲೂಕುಗಳ ರೈತರು ಪರಿಹಾರ ಧನ ಪಡೆದವರಲ್ಲಿ ಹೆಚ್ಚಿದ್ದಾರೆ. 2019–20ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಹೂ ಬೆಳೆಗಾರರ ದೃಢೀಕರಿಸಿದ ಪಟ್ಟಿಯನ್ನು ಅನುಸರಿಸಿ ಮತ್ತು ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಇಲ್ಲದಿದ್ದರೂ ಹೂ ಬೆಳೆದಿರುವುದಾಗಿ ದೃಢೀಕರಿಸಿದ ರೈತರಿಗೆ ಪರಿಹಾರ ಧನ ದೊರೆತಿದೆ.
ತಾಲ್ಲೂಕು ತೋಟಗಾರಿಕಾ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳ ನಾಮಫಲಕಗಳಲ್ಲಿ ಪರಿಹಾರಕ್ಕೆ ಅರ್ಹರಾದ ಫಲಾನುಭವಿಗಳನ್ನು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಈ ರೈತರು ಯಾವುದೇ ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಿರಲಿಲ್ಲ.
ಆದರೆ ಕೆಲವು ರೈತರು ಸ್ವಯಂ ದೃಢೀಕರಣದ ಮೂಲಕ ನಮಗೂ ಬೆಳೆ ನಷ್ಟವಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ಅಲ್ಲಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಸಹ ನಡೆಸಿದ್ದರು. ಇಂತಹವರಲ್ಲಿ ಸುಮಾರು 1,500 ರೈತರು ದಾಖಲೆಗಳನ್ನು ಕೊಟ್ಟಿಲ್ಲ.
ಜಮೀನುಗಳ ಪಹಣಿಗಳು, ಖಾತೆಗಳು ರೈತರ ಹೆಸರಿನಲ್ಲಿ ಇಲ್ಲದಿರುವುದು, ಆಧಾರ್ ಕಾರ್ಡ್ಗಳು, ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿ ಇಲ್ಲದಿರುವುದು ಹೀಗೆ ನಾನಾ ರೀತಿಯಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸದ ರೈತರಿಗೆ ಪರಿಹಾರ ತಲುಪಿಲ್ಲ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ರಘು ತಿಳಿಸಿದರು.