ಕಾರ ಹುಣ್ಣಿಮೆಯಂದು ರೈತರು ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸುತ್ತಾರೆ. ಹೋಳಿಗೆ ಸೇರಿದಂತೆ ವಿವಿಧ ರೀತಿ ಸಿಹಿ ಅಡುಗೆ ಮಾಡುತ್ತಾರೆ. ಎತ್ತುಗಳಿಗೆ ಸಿಹಿ ತಿನಿಸುಗಳನ್ನು ತಿನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಕರೆದೊಯ್ದು, ಕರಿ ಹರಿದು, ಎತ್ತುಗಳಿಗೆ ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸುತ್ತಾರೆ. ಕೆಲವೆಡೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಕೆಲವೆಡೆ ಕೊಬ್ಬರಿ ಹೋರಿ ಓಡಿಸುವ ಸಂಪ್ರದಾಯವಿದೆ.