ಹಾಗಲವಾಡಿ: ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸಲು ಇರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹದಿನೈದು ದಿನಗಳಲ್ಲಿ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಹೋಬಳಿಯ ಕಳ್ಳನಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.
ಹಾಗಲವಾಡಿ ಗ್ರಾಮದ ಕೆರೆಗೆ ಕುಡಿಯುವ ನೀರಿನ ನಾಲೆ ನಿರ್ಮಾಣ ಹಂತದಲ್ಲಿ ರೈತರಿಗೆ ಭೂ ಸ್ವಾದಿನ ಪ್ರಕ್ರಿಯೆ ನಿಧಾನವಾಗಿರುವುದರಿಂದ 5 ವರ್ಷದಿಂದ ಕಾಮಗಾರಿಗೆ ಸಮಸ್ಯೆ ಎದುರಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಬೇಕು. 35 ಎಕರೆಯಷ್ಟು ಭೂಸ್ವಾಧೀನವಷ್ಟೇ ಬಾಕಿ ಇದ್ದು, ಬೇಗ ಮುಗಿಸಬೇಕು ಎಂದರು.
ಗುರುವಾರ ಎಲ್ಲ ರೈತರ ಬಳಿಗೆ ಅಧಿಕಾರಿಗಳನ್ನು ಕಳುಹಿಸಿ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗಲವಾಡಿ ಕೆರೆಗೆ ನೀರಿನ ವ್ಯವಸ್ಥೆಯಾದರೆ ಎರಡು ಹೋಬಳಿಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಅಂತರ್ಜಲ ಮಟ್ಟವೂ ಹೆಚ್ಚಲಿದೆ ಎಂದರು.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, 5 ವರ್ಷದ ಹಿಂದೆ ಈ ಕಾಮಗಾರಿ ಆರಂಭವಾಗಿದೆ. ಅಧಿಕಾರಿಗಳು ರೈತರ ಭೂಮಿಗಳಿಗೆ ಹೋಗದೆ ಎಲ್ಲಿಯೊ ಕುಳಿತು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಕೊಡಲೇ ರೈತರ ಸಮಸ್ಯೆ ಬಗೆಹರಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು. ಹಾಗಲವಾಡಿ ಕೆರೆಗೆ ನೀರು ಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಳಿಲುಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿದಾನಂದ್ ಮಾತನಾಡಿ, ‘ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಸಮಸ್ಯೆ ಎದುರಾಗಿದೆ. 5 ವರ್ಷದಿಂದ ಬೆಳೆ ಕಳೆದುಕೊಂಡಿದ್ದೇವೆ. ಇದಕ್ಕೆ ಯಾರು ಹೊಣೆ. ಅಂದೇ ಈ ಯೋಜನೆ ಮುಗಿದಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ’ ಎಂದರು.
ರೈತ ಮುಖಂಡ ಲೋಕೇಶ್ ಮಾತನಾಡಿ, 5 ವರ್ಷದ ಹಿಂದೆಯೇ ಗುತ್ತಿಗೆದಾರರು ಕಾಮಗಾರಿ ಆರಂಭಿ ಸಿದ್ದು, ಇಂದಿಗೂ ಪೂರ್ಣಗೊಂಡಿಲ್ಲ. 5 ವರ್ಷದಿಂದ ಸಾಕಷ್ಟು ಬೆಳೆಗಳನ್ನು ಹಾಳು ಮಾಡಿಕೊಂಡಿದ್ದು, ಸರಕಾರ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಉಪ ವಿಭಾಗಧಿಕಾರಿ ಅಜಯ್, ತಹಶೀಲ್ದಾರ್ ಪಿ.ಆರತಿ. ಎಸ್ಎಲ್ಒ ಯಶೋದಾ, ಇಇ ಮೋಹನ್, ಎಇಇ ಶಿವಣ್ಣ, ಪಿಎಸ್ಐ ವಿಜಯಲಕ್ಷ್ಮಿ, ಮೆಡಿಕಲ್ ಬಾಬು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್, ಕಿರಣ್, ರೈತ ಮುಖಂಡ ಕೃಷ್ಣಾಜಟ್ಟಿ, ಉದಯ್, ಕಂದಾಯ ಅಧಿಕಾರಿಗಳಾದ ನಾರಾಯಣ್, ಗುರುಪ್ರಸಾದ್ ಇದ್ದರು.