ತುಮಕೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೊ ಮೂಲಕ ತಿಳಿಸಿದ್ದು, ತನಿಖಾ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಸ್ಐಟಿ ಬಳಿ ಇರುವ ಮಾಹಿತಿ, ದಾಖಲೆಗಳ ಆಧಾರದ ಮೇಲೆ ಪ್ರಜ್ವಲ್ ವಿಚಾರಣೆ ನಡೆಯಲಿದೆ. ಈಗಾಗಲೇ ಬಂಧನ ವಾರೆಂಟ್ ಜಾರಿಯಾಗಿರುವುದರಿಂದ ತನಿಖೆಯ ಭಾಗವಾಗಿ ಬಂಧನ ಮಾಡಬೇಕಾಗುತ್ತದೆ’ ಎಂದರು.
‘ಎಸ್ಐಟಿ ಎದುರು ಪ್ರಜ್ವಲ್ ಏನೆಲ್ಲ ಹೇಳಿಕೆ ಕೊಡುತ್ತಾರೊ ಕೊಡಲಿ. ತನಿಖಾ ತಂಡ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ. ರಾಜ್ಯದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಮೊದಲು ರಾಜ್ಯಕ್ಕೆ ಬಂದು ತನಿಖೆ ಎದುರಿಸಲಿ’ ಎಂದು ಅವರು ತಿಳಿಸಿದರು.