ಕುಣಿಗಲ್: ತಾಲ್ಲೂಕಿನ ಗ್ರಾಮೀಣ ಜನರು ಕೋವಿಡ್ನಿಂದ ಸಾವು, ನೋವು ಅನುಭವಿಸುತ್ತಿದ್ದಾರೆ. ಮೊದಲು ಜೀವ ಉಳಿಸೋಣ. ನಂತರ ರಾಜಕೀಯ ಮಾಡೋಣ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಪಟ್ಟಣದ ಸಪ್ತಗಿರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಉಚಿತ ಆಮ್ಲಜನಕ ಸಹಿತ ಆಸ್ಪತ್ರೆಯನ್ನಾಗಿ ಸಾರ್ವಜನಿಕರಿಗೆ ಸಮರ್ಪಿಸಿದ ನಂತರ ಮಾತನಾಡಿದರು.
ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಪಡೆದರೆ ಸೋಂಕಿನಿಂದ ಪಾರಾಗಬಹುದು. ಸಮಸ್ಯೆ ಗಂಭೀರವಾದರೆ ಪ್ರಾಣಕ್ಕೆ ಸಂಚಕಾರವಾಗುತ್ತದೆ. ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಸರ್ಕಾರ ಸೋಂಕಿತರಿಗೆ ಅಗತ್ಯವಾದ ಆಮ್ಲಜನಕ ಸಹಿತ ಹಾಸಿಗೆಗಳನ್ನು ಹೆಚ್ಚಿಸದ ಸ್ಥಿತಿಯಲ್ಲಿದೆ. ರೆಮ್ಡಿಸಿವಿರ್ ಸಕಾಲದಲ್ಲಿ ನೀಡುತ್ತಿಲ್ಲ. ಇದರಿಂದಾಗಿ ಸ್ಥಳೀಯ ಸಪ್ತಗಿರಿ ಆಸ್ಪತ್ರೆ ಮಾಲೀಕ ಡಾ. ಕುಮಾರ್ ಅವರನ್ನು ಸಂಪರ್ಕಿಸಿದಾಗ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಸಹಮತ ನೀಡಿದ್ದರು. ₹5 ಲಕ್ಷ ವೆಚ್ಚದಲ್ಲಿ ಅಗತ್ಯ ಪರಿಕರ ಒದಗಿಸುವುದರ ಜತೆಗೆ ನಿತ್ಯವೂ ಆಮ್ಲಜನಕ ಸಿಲಿಂಡರ್ ವ್ಯವಸ್ಥೆಮಾಡಿ, ಪ್ರಯೋಗಾಲಯ ಮತ್ತು ಔಷಧಿ ವೆಚ್ಚ ಹೊರತುಪಡಿಸಿ ಚಿಕತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ಸಿದ್ಧವಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ನಾಗೇಂದ್ರ, ಸದಸ್ಯರಾದ ಉದಯ್, ರಾಮು, ಹಿರಿಯ ವಕೀಲ ವೆಂಕಟಕೃಷ್ಣರಾವ್, ಡಾ.ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಚಂದ್ರಶೇಖರ್, ಪಾಪಣ್ಣ ಇದ್ದರು.