ಹುಳಿಯಾರು: ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯೆ ಎನ್.ಇಂದಿರಮ್ಮ ಅವರು ಕಂದಿಕೆರೆ ಬಳಿಯ ತೋಟದಲ್ಲಿ ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ದೇಶದ ಗಾಂಧಿ ಅನುಯಾಯಿಗಳು ಕೋಟ್ಯಂತರ ಮಂದಿ ಸಂಕಷ್ಟದಲ್ಲಿರುವಾಗ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಈ ಸತ್ಯಾಗ್ರಹ ನಡೆಸಿದರು.
ಜೂನ್ 5ರಿಂದ ಪರಿಸರ ದಿನದಿಂದ ಅಕ್ಟೋಬರ್ 2ರ ವಿಶ್ವ ಶಾಂತಿ ದಿನದವರೆಗೆ ಒಬ್ಬೊಬ್ಬರು ಒಂದೊಂದು ದಿನದಂತೆ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಎನ್.ಇಂದಿರಮ್ಮ ಮಾತನಾಡಿ, ‘ಬಹುತೇಕ ಬಡವರು ಉಪವಾಸ ಇರುವಾಗ ನಾವು ಸುಮ್ಮನಿರುವುದು ಸರಿಯಲ್ಲ. ಸತ್ಯಾಗ್ರಹದ ಮುಖ್ಯ ಆಶಯ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ರೈತರು, ಹಳ್ಳಿಗಳ ಆರ್ಥಿಕತೆ ಮತ್ತು ಪರಿಸರವನ್ನು ಸಂರಕ್ಷಣೆ ಮಾಡುತ್ತಾ ಗಾಂಧಿ ಕನಸಿನ ಸ್ವರಾಜ್ಯ ಕಟ್ಟುವುದು. ವಲಸೆ ಕಾರ್ಮಿಕರಿಗೆ ₹5 ಸಾವಿರ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.
ಗಾಂಧಿಯನ್ ಕಲೆಕ್ಟಿವ್ ಇಂಡಿಯಾ ಸಂಘಟನೆ ಸದಸ್ಯ ರಾಮಕೃಷ್ಣಪ್ಪ, ಹೊಯ್ಸಳಕಟ್ಟೆ ಯುವ ಮುಖಂಡ ಗಿರೀಶ್, ಡಾ.ಸಿ.ಎಸ್.ರಂಗನಾಥ್, ಕಾರ್ಮಿಕ ಸಂಘಟನೆಯ ಮೈಲಾರಪ್ಪ, ಶ್ರೀಧರ, ಮಲ್ಲಪ್ಪ, ರವಿ, ಸಂಸ್ಕರಣ ಘಟಕದ ಗಂಗಮ್ಮ, ಬೋರಮ್ಮ, ಸುಶೀಲಮ್ಮ, ಲಕ್ಷ್ಮಮ್ಮ ಹಾಜರಿದ್ದರು.