ಪಾವಗಡ: ತಾಲ್ಲೂಕಿನ ತಿರುಮಣಿ ಬಳಿಯ ಸೋಲಾರ್ ವಿದ್ಯುತ್ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸ್ಥಳೀಯರು ಬುಧವಾರ ಧರಣಿ ನಡೆಸಿದರು.
ಘಟಕ ನಿರ್ಮಾಣಕ್ಕೆ ಸ್ಥಳೀಯ ರೈತರು ತಮ್ಮ ಜಮೀನುಗಳನ್ನು ಕಡಿಮೆ ಬೆಲೆಗೆ ಗುತ್ತಿಗೆ ನೀಡಿದ್ದಾರೆ. ಬಹಳಷ್ಟು ರೈತರು ವ್ಯವಸಾಯಕ್ಕೆ ಜಮೀನಿಲ್ಲದೆ ಇತರ ಉದ್ಯೋಗ ಅವಲಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಘಟಕದಲ್ಲಿರುವ ತಾಂತ್ರಿಕ, ಭದ್ರತಾ ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಧರಣಿನಿರತರು ಆರೋಪಿಸಿದರು.
ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕೆಲಸ ನೀಡುವ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಮನ್ನಣೆ ನೀಡಿಲ್ಲ. ಇಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಯವರು ಸ್ಥಳೀಯರ ವಿರುದ್ಧ ದೌರ್ಜನ್ಯದಿಂದ ನಡೆದು ಕೊಳ್ಳುತ್ತಿದ್ದಾರೆ. ಕಂಪನಿಗಳು ಸೂಕ್ತ ಕ್ರಮ ವಹಿಸದಿದ್ದರೆ ಹೋರಾಟ ತೀವ್ರ ಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಉದ್ಯೋಗ ಕಡಿತಗೊಳಿಸಬಾರದು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಮಲ್ಲಿಕಾರ್ಜುನ್, ಆಂಜನೇಯುಲು, ನಾಗಭೂಷಣ್, ಮಲ್ಲಣ್ಣ ಇದ್ದರು.