ಕೊರಟಗೆರೆ: ತಾಲ್ಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿಶೋರ್ ಸಿಂಗ್ ಲಾಲ್ ನಾಯಕ್ ₹20 ಸಾವಿರ ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗ್ರಿಹಳ್ಳಿ ಗ್ರಾಮದ ನಾಗೇಶ್ ಎಂಬುವರು ಅಡಿಕೆ ಪಟ್ಟೆ ಕಾರ್ಖಾನೆ ತೆರೆಯಲು ಪಂಚಾಯಿತಿ ವತಿಯಿಂದ ಎನ್ಒಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಎನ್ಒಸಿ ನೀಡಲು ಅಧ್ಯಕ್ಷ ಹಾಗೂ ಪಿಡಿಒ ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಶುಕ್ರವಾರ ಮಧ್ಯಾಹ್ನ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ, ಹಣ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿಗಳಾದ ಉಮಾಶಂಕರ್, ರಾಮಕೃಷ್ಣಪ್ಪ, ಇನ್ಸ್ಪೆಕ್ಟರ್ಗಳಾದ ಮಹ್ಮದ್ ಸಲೀಂ, ಕೆ.ಸುರೇಶ್, ಶಿವರುದ್ರಪ್ಪ ಮೇಟಿ ಕಾರ್ಯಾಚರಣೆ ನಡೆಸಿದ್ದರು.