ಅಪೂರ್ಣವಾದ ರಸ್ತೆ ಕಾಮಗಾರಿಯ ಸಮಸ್ಯೆ ಒಂದೆಡೆಯಾದರೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಕಾಮಗಾರಿಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಅಲ್ಪಸ್ವಲ್ಪ ಮಳೆಯಾದರೂ ಮೊಳಕಾಲುದ್ದ ನಿಲ್ಲುವ ನೀರು ಎಲ್ಲೂ ಹರಿಯದೆ ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಗುರುವಾರ ಸಂತೆಯ ದಿನವಾದ್ದರಿಂದ ಜನರ ಓಡಾಡ ತುಸು ಹೆಚ್ಚಾಗಿತ್ತು. ಮಧ್ಯಾಹ್ನದ ವೇಳೆಗೆ ರಭಸವಾಗಿ ಸುರಿದ ಮಳೆಗೆ ರಾಮಗೋಪಾಲ್ ವೃತ್ತದಲ್ಲಿ ದೊಡ್ಡ ಕೆರೆಯೇ ನಿರ್ಮಾಣವಾಗಿತ್ತು. ವಾಹನಗಳು ಅರ್ಧ ಮುಳುಗುವ ನೀರಿನಲ್ಲಿ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಿದರು. ನೀರಿನಲ್ಲಿ ಗುಂಡಿಗಳು ಕಾಣದೆ ಕೆಲವರುರಸ್ತೆಯಲ್ಲಿ ಬಿದ್ದು, ಎದ್ದು ಇಡೀ ವ್ಯವಸ್ಥೆಯ ಮೇಲೆ ಹಿಡಿಶಾಪಹಾಕುತ್ತಿದ್ದರು.