ಗುಬ್ಬಿ: ‘ಯುವಕರು ಸ್ವಾತಂತ್ರ್ಯದ ಮಹತ್ವ ಅರಿತು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ. ವೆಂಕಟಾಚಲಯ್ಯ ತಿಳಿಸಿದರು.
ಪಟ್ಟಣದ ಕಾಲೇಜು ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ‘ಫಿಟ್ ಇಂಡಿಯಾ ರನ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಶ್ರಮದ ಪ್ರತಿಫಲ ಅನುಭವಿಸುತ್ತಿರುವ ನಾವು ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕು. ಯುವಶಕ್ತಿ ದೇಶದ ಅಮೂಲ್ಯ ಸಂಪತ್ತಾಗಿದೆ. ಇದನ್ನು ಸುವ್ಯವಸ್ಥಿತ ರೀತಿಯಲ್ಲಿ ಬಳಸಿಕೊಂಡಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ ಎಂದರು.
ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವ ಮನಸ್ಥಿತಿಯನ್ನು ಯುವಕರು ರೂಢಿಸಿ ಕೊಳ್ಳ ಬೇಕಿದೆ ಎಂದು ತಿಳಿಸಿದರು.
ಎನ್ಎಸ್ಎಸ್ ಅಧಿಕಾರಿ ಪ್ರೊ.ಲಿಂಗರಾಜು ಮಾತನಾಡಿ, ಗಾಂಧೀಜಿ, ಗೋಖಲೆ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರ ಆದರ್ಶ ಮೈಗೂಡಿಸಿಕೊಂಡು ದೇಶದ ರಕ್ಷಣೆಗೆ ಮುಂದಾಗಬೇಕಿದೆ. ಯುವಕರು ಒಗ್ಗೂಡಿದರೆ ಮಾತ್ರ ದೇಶ ಪ್ರಗತಿಯ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ಎನ್ಎಸ್ಎಸ್ ಅಧಿಕಾರಿಗಳಾದ ಕಾಳಪ್ಪ, ಅನಿತಾಲಕ್ಷ್ಮಿ, ಎನ್ಸಿಸಿ ಅಧಿಕಾರಿ ಮೋಹನ್ ಕುಮಾರ್, ನ್ಯಾಕ್ ಸಂಚಾಲಕ ಪ್ರೊ.ಶ್ರೀನಿವಾಸಯ್ಯ, ಕಾಲೇಜಿನ ವ್ಯವಸ್ಥಾಪಕ ಶಿವಯ್ಯ ಇದ್ದರು.