ತುಮಕೂರು: ವಿಶ್ವವಿದ್ಯಾಲಯ ಕಲಾ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಹಮ್ಮಿಕೊಂಡಿರುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಮಂಗಳವಾರ ವಿ.ವಿಯಲ್ಲಿ ಆರಂಭವಾಯಿತು.
ಮಾರ್ಚ್ 17ರ ವರೆಗೂ ನಡೆಯುವ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದು, ಪ್ರಥಮ, ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಪ್ರಶಸ್ತಿ, ಪದಕ, ಪ್ರಮಾಣಪತ್ರ ನೀಡಲಾಗುತ್ತದೆ.
ಪಂದ್ಯಾವಳಿಗೆ ಚಾಲನೆ ನೀಡಿದ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನ ಕುಮಾರ್ ಮಾತನಾಡಿ, ‘ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ವಿಚಾರಗಳಿಗೆ ಪರಿಹಾರದ ರೂಪದಲ್ಲಿ ಕ್ರೀಡೆ ಕಾರ್ಯ ನಿರ್ವಹಿಸಲಿದೆ. ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆ ಪ್ರದರ್ಶಿಸಿದಾಗ ಕ್ರೀಡೆ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.
ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ‘ದೈಹಿಕ, ಮಾನಸಿಕ ಚಟುವಟಿಕೆ ಸಮತೋಲನದಿಂದ ಇದ್ದಾಗ ಕ್ರೀಡಾಪಟು ಯಶಸ್ವಿಯಾಗುತ್ತಾನೆ. ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಪ್ರಾಶಸ್ತ್ಯ ನೀಡಲಾಗಿದೆ’ ಎಂದರು.
ವಿ.ವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎ.ಎಂ.ಮಂಜುನಾಥ್, ಕಲಾ ಕಾಲೇಜು ದೈಹಿಕ ಶಿಕ್ಷಣ ವಿಭಾಗದ ಸಂಚಾಲಕ ಡಾ.ಆರ್.ಸುದೀಪ್ ಕುಮಾರ್, ಪ್ರಾಧ್ಯಾಪಕರಾದ ಟಿ.ಎನ್.ಹರಿಪ್ರಸಾದ್, ಕೆ.ರಾಮಚಂದ್ರಪ್ಪ, ಜಿ.ದಾಕ್ಷಾಯಿಣಿ, ಸಹಾಯಕ ಗ್ರಂಥ ಪಾಲಕಿ ಡಾ.ಎಸ್.ಸುಮಾದೇವಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.