ಕುಣಿಗಲ್: ‘ಕನ್ನಡ ಸಾಹಿತ್ಯ ಪರಿಷತ್ ಕೆಲವರ ಸ್ವತ್ತಾಗದೆ ನಾಡಿನ ಸಮಸ್ತ ಕನ್ನಡಿಗರ ಪರಿಷತ್ತಾಗಲು ಶ್ರಮಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ನ ಆಜೀವ ಸದಸ್ಯರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
‘ಕುಣಿಗಲ್ ತಾಲ್ಲೂಕಿನ ಮೂಲದವರಾಗಿದ್ದು, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ತಾಲ್ಲೂಕಿನ ವ್ಯಕ್ತಿ ಅಂತಹ ಪದವಿಗೇರಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಸಾಹಿತ್ಯ ಪರಿಷತ್ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಶ್ರೇಷ್ಠ ಕೃತಿಗಳಿಗೆ ಪ್ರೋತ್ಸಾಹಧನ, ಜಿಲ್ಲಾ ಮತ್ತು ತಾಲ್ಲೂಕಿನ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಜತೆಗೆ ಪರಿಷತ್ನ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲಾಗುವುದು. ಮುದ್ರಾಣಾಲಯವನ್ನು ಆಧುನೀಕರಿಸಿ ಕನ್ನಡ ನುಡಿ ಪತ್ರಿಕೆಯ ವಿಸ್ತಾರಕ್ಕೆ ಗಮನಹರಿಸಲಾಗುವುದು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಕ.ಚ. ಕೃಷ್ಣಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮ್, ಆಜೀವ ಸದಸ್ಯರಾದ ತೋಪನಯ್ಯ, ಬೋರೆಗೌಡ, ಕರಿಗೌಡ, ನಳಿನಾ ಕೃಷ್ಣಪ್ಪ, ಸಿದ್ದಪ್ಪ ಇದ್ದರು.