ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಿಟಿಗರ ಒಬಿಸಿ ಹಕ್ಕೊತ್ತಾಯ: ರಾಷ್ಟ್ರಪತಿ ಕಚೇರಿ ತಲುಪಿದ ಅಧ್ಯಯನ ವರದಿ

Published 13 ಆಗಸ್ಟ್ 2023, 15:19 IST
Last Updated 13 ಆಗಸ್ಟ್ 2023, 15:19 IST
ಅಕ್ಷರ ಗಾತ್ರ

ತುಮಕೂರು: ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನದ ವರದಿಯು ಈಗಾಗಲೇ ರಾಷ್ಟ್ರಪತಿ ಕಚೇರಿ ತಲುಪಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಅಖಿಲ ಕುಂಚಿಟಿಗರ ಮಹಾಮಂಡಲ, ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದಿಂದ ಕುಂಚಿಟಿಗರನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕುಂಚಿಟಿಗ ಸಮುದಾಯಕ್ಕೆ ಶಕ್ತಿ ತುಂಬಲು ಕೇಂದ್ರದ ಒಬಿಸಿ ಮೀಸಲಾತಿ ಅವಶ್ಯಕತೆ ಇದೆ. ಈಗಾಗಲೇ ರಾಷ್ಟ್ರಪತಿ ಕಚೇರಿ ಮೆಟ್ಟಿಲು ಹತ್ತಿರುವ ವರದಿ ಕುಂಚಿಟಿಗರ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದೀರ್ಘವಾಗಿ 50 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇನ್ನು ಮುಂದೆ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಕೆಲವರು ಜಯಚಂದ್ರ ಅವರಿಗೆ ವಯಸ್ಸಾಗಿದೆ ಎಂದು ಹೇಳುತ್ತಾರೆ. ಆದರೆ ಜಯಚಂದ್ರ ಶಕ್ತಿ ಏನೆಂಬುದು ಅವರಿಗೆ ಗೊತ್ತಿಲ್ಲ ಎಂದರು.

ಸಂಸದ ಜಿ.ಎಸ್.ಬಸವರಾಜು, ‘ಕುಂಚಿಟಿಗರನ್ನು ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತು ಈಗಾಗಲೇ ಮೂರ್‍ನಾಲ್ಕು ಭಾರಿ ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಮತ್ತೊಮ್ಮೆ ರಾಜ್ಯದ 25 ಸಂಸದರೂ ಸೇರಿ ಪ್ರಧಾನಿ ಅವರನ್ನು ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ‘ಕೃಷಿ ಮತ್ತು ಹೈನುಗಾರಿಕೆ ಸಮಾಜದ ಮೂಲ ಕಸುಬಾಗಿದೆ. ರಾಜಕೀಯ ಹೊಂದಾಣಿಕೆ ಕೊರತೆಯಿಂದ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಸ್ವಲ್ಪ ಹಿನ್ನಡೆಯಾಗುತ್ತಿದೆ. ರಾಜ್ಯ ಸರ್ಕಾರ ಕುಂಚಿಟಿಗರಿಗೆ ಹಿಂದುಳಿದ ವರ್ಗಗಳ 3ಎ ಮೀಸಲಾತಿ ನೀಡಿದ್ದು, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ದೊರೆತರೆ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಪ್ರಾತಿನಿಧ್ಯ ಸಿಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ನವೀನ್‌, ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ರಂಗಹನುಮಯ್ಯ, ಗೌರವಾಧ್ಯಕ್ಷ ಪುಟ್ಟೀರಪ್ಪ, ಮುಖಂಡ ಕಸುವನಹಳ್ಳಿ ರಮೇಶ್ ಮಾತನಾಡಿದರು. ಮುಖಂಡರಾದ ನವೀನ್, ಕೆ.ಶ್ರೀಧರ್‌, ಲಲಿತಾ ಮಲ್ಲಪ್ಪ, ಅನಂತರಾಜು, ರಂಗನಾಥ್, ತುಂಗೋಟಿ ರಾಮಣ್ಣ, ಪ್ರೊ.ನಾಗೇಂದ್ರ, ಶ್ರೀನಿವಾಸಗೌಡ, ದೊಡ್ಡೇಗೌಡ, ರಾಜು, ಕಾಂತರಾಜು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT