ಕುಣಿಗಲ್: ತಾಲ್ಲೂಕಿನ ಕಗ್ಗರೆಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಪರ ಚುನಾವಣಾ ಪ್ರಚಾರ ಸಾಮಗ್ರಿ ಹಂಚಲು ಸಿದ್ಧತೆ ನಡೆಸಿದ್ದ ಯುವಕರ ಗುಂಪಿನ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ದಾಳಿ ನಡೆಸಿದ್ದಾರೆ. ಪ್ರಚಾರ ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕರ ತಂಡ ಪರಾರಿಯಾಗಿದೆ.
ಬೆಂಗಳೂರಿನ ವಿವಿಧ ಕಾಲೇಜಿನ 300ಕ್ಕೂ ಹೆಚ್ಚು ವಿಧ್ಯಾರ್ಥಿಗಳ ತಂಡ ಎರಡು ಖಾಸಗಿ ಬಸ್ ಮತ್ತು ಎರಡು ಕಾರುಗಳಲ್ಲಿ ಕಗ್ಗರೆ ಗ್ರಾಮಕ್ಕೆ ಬಂದು ದೇವಾಲಯದ ಸಮೀಪ ಮಾದರಿ ಮತಯಂತ್ರ, ಸ್ಕ್ಯಾನರ್ ಕೋಡ್ಗಳಿದ್ದ ಡಿಜಿಟಲ್ ಕಾರ್ಡ್ಗಳನ್ನು ಜೋಡಿಸುತ್ತಿದ್ದರು.
ಇದನ್ನು ಕಂಡ ಗ್ರಾಮಸ್ಥರು ಈ ಬಗ್ಗೆ ಯುವಕರನ್ನು ಪ್ರಶ್ನಿಸಿದ್ದಾರೆ. ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡದ ಕಾರಣ ಗ್ರಾಮಸ್ಥರು ಬಿಜೆಪಿ ಮತ್ತು ಜೆಡಿಎಸ್ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬಸ್ನಲ್ಲಿದ್ದ ಪ್ರಚಾರ ಸಾಮಗ್ರಿಗಳನ್ನು ರಸ್ತೆಗೆ ಎಸೆದು ಧಿಕ್ಕಾರ ಕೂಗಿದರು. ಯುವಕರ ತಂಡ ಪ್ರಚಾರ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದೆ.
ಯಡಿಯೂರು ವಿಭಾಗದ ಎಫ್.ಎಸ್.ಟಿ. ಅಧಿಕಾರಿ ಕೆಂಪಯ್ಯ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅನುಮತಿ ಇಲ್ಲದೆ ಬಳಸಿದ ಎರಡು ಬಸ್, ಎರಡು ಕಾರು ಮತ್ತು ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಹೇಳಿಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕ ಡಾ.ರಂಗನಾಥ್ ಅವರು ಕೊತ್ತಗೆರೆ ರಾಜೇಶ್ ಮತ್ತು ದೀಪೂ ಎಂಬುವರ ನೇತೃತ್ವದಲ್ಲಿ ಕನಕಪುರದ ಯುವಕರ ತಂಡವನ್ನು ಕಳಿಸಿ ಚುನಾವಣಾ ಅಕ್ರಮಕ್ಕೆ ಸಿದ್ಧರಾಗಿದ್ದಾರೆ. ಅಧಿಕಾರಿಗಳು ಚುನಾವಣಾ ಅಕ್ರಮ ತಡೆಯದಿದ್ದರೆ ಬಿಜೆಪಿ ಕಾರ್ಯಕರ್ತರೆ ತಡೆಯುವ ಪ್ರಯತ್ನ ಮಾಡುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಪರ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ