ಹಿಂದೆ ಉತ್ತಮ ಮಳೆ ಹಾಗೂ ನೀರಿನ ಅನುಕೂಲವಿದ್ದರಿಂದ ವನ್ಯಧಾಮದಲ್ಲೇ ಹುರಳಿ, ಮೆಕ್ಕೆಜೋಳ, ತೊಗರಿ ಮತ್ತು ಅಲಸಂದಿ ಬಿತ್ತನೆ ಮಾಡಲಾಗುತ್ತಿತ್ತು. ಚೆಕ್ಡ್ಯಾಮ್ ಹಾಗೂ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಹೆಚ್ಚಾಗುತ್ತಿರುವುದರಿಂದ ಮೇವು ಮತ್ತು ನೀರಿನ ಸಮಸ್ಯೆ ಎದುರಾಗುತ್ತಿದೆ. 1,200 ಅಡಿ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಸಿಗದಂತಾಗಿದೆ. ಇದರಿಂದ ಆಹಾರ ಮತ್ತು ನೀರನ್ನು ಅರಸಿ ಹೊರಟ ಕೃಷ್ಣಮೃಗಗಳು ಐಡಿಹಳ್ಳಿ, ಕಡಗತ್ತೂರು, ಕಲಿದೇವಪುರ, ವಿಠಲಾಪುರ, ಆಂಧ್ರಪ್ರದೇಶದ ಮಡಕಶಿರಾ ಜೊತೆಗೆ ಪಾವಗಡದ ಸಮೀಪದವರೆಗೂ ತೆರಳುತ್ತಿವೆ ಎನ್ನುತ್ತಾರೆ ಸ್ಥಳೀಯರು.