ಕೊರಟಗೆರೆ: ಪರಿಶಿಷ್ಟ ಜಾತಿ ಪಟ್ಟಿಯಿಂದ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಜಾತಿಗಳನ್ನು ಕೈಬಿಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಸಂಘದ ಅಧ್ಯಕ್ಷ ಶ್ರೀರಾಮುಲುನಾಯ್ಕ ಆಗ್ರಹಿಸಿದರು.
ಪಟ್ಟಣದ ಹೊರೆವಲಯದ ಬೈಲಾಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ತಾಲ್ಲೂಕು ಬಂಜಾರ ಸೇವಾ ಸಂಘ ಗುರುವಾರ ಆಯೋಜಿಸಿದ್ದ ಪತ್ರ ಚಳವಳಿ ಸಭೆಯಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಿಂದ ಲಾಂಬಾಣಿ ಸಮುದಾಯವನ್ನು ಪ್ರಯತ್ನಿಸಿದರೆ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಿರ್ದೇಶಕ ವಿ.ಎನ್. ಮೂರ್ತಿ ಮಾತನಾಡಿ, ಬಂಜಾರ ಸಮುದಾಯ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದಿದೆ. ಸಮುದಾಯದ ತಾಂಡಗಳಿಗೆ ಕಂದಾಯ ಗ್ರಾಮದ ಕನಸು ಇನ್ನೂ ಈಡೇರಿಲ್ಲ. ಈಗ ಪತ್ರ ಚಳವಳಿಯ ಮೂಲಕ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತದೆ. ಪರಿಶಿಷ್ಟ ಜಾತಿಯಿಂದ ಲಂಬಾಣಿ ಸಮುದಾಯ ಕೈಬಿಟ್ಟರೇ ಹೋರಾಟದ ಹಾದಿ ಹಿಡಿಯುತ್ತೇವೆ. ಎರಡು ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಂಚೆ ಮೂಲಕ ತಲುಪಿಸಲು ಪ್ರಯತ್ನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಬಂಜಾರ ಸಂಘದ ಲಕ್ಷ್ಮಣನಾಯ್ಕ, ಕಾಳಿಚರಣ್, ನಾರಾ ಯಣನಾಯ್ಕ, ಸಿದ್ದೇಶ್, ಲಕ್ಷ್ಮನಾಯ್ಕ, ಮುರುಳಿನಾಯ್ಕ, ಕುಮಾರನಾಯ್ಕ, ಸುಬ್ರಹ್ಮಣ್ಯ, ಕಾಳಿಂಗನಾಯ್ಕ, ವೆಂಕಟೇಶ ಬಾಬು, ಕೃಷ್ಣನಾಯ್ಕ, ಶಿವಪ್ಪನಾಯ್ಕ, ವಿಜಯಶಂಕರ, ಶಂಕರ್, ಲಕ್ಷ್ಣಣ ನಾಯ್ಕ, ರಮೇಶನಾಯ್ಕ, ಜಯರಾಯ ನಾಯ್ಕ, ರಾಮಚಂದ್ರನಾಯ್ಕ ಇದ್ದರು.