ತೋವಿನಕೆರೆ: ನೂರಾರು ಸ್ವಾಮೀಜಿಗಳು ಕನ್ನೇರಿ ಮಠದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಷ್ಟಗಳ ಪರಿಹಾರಕ್ಕೆ ‘ನೇಗಿಲ ಯೋಗಿ’ಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಮಠದ ಪೀಠಾದ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಿದ್ಧರಬೆಟ್ಟ ರಂಭಾಪುರಿ ಶಾಖಾ ಮಠದ ಅವರಣದಲ್ಲಿ ಸೋಮವಾರ ನಡೆದ ಬೆಳದಿಂಗಳ ಕೂಟದಲ್ಲಿ ಅವರು ಮಾತನಾಡಿದರು.
ಮಠಗಳಲ್ಲಿ ಗಾಣದ ಯಂತ್ರ ಹಾಕಿ ಶುದ್ಧ ಎಣ್ಣೆ ತೆಗೆಯುವುದು, ಸಾವಯವ ಮಳಿಗೆ ಸ್ಥಾಪಿಸಿ ರಾಸಾಯನಿಕ ರಹಿತ ಕೃಷಿ ಉತ್ಪನ್ನ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ನಬಾರ್ಡ್ ಸಹಾಯಕ ಜನರಲ್ ಮ್ಯಾನೇಜರ್ ಕೀರ್ತಿ ಪ್ರಭ ಅವರು ‘ಕೃಷಿ ಉದ್ಯಮಿಯಾಗಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾಭಿವೃದ್ಧಿಗೆ ನಬಾರ್ಡ್ ಮೂಲಕ ದೊರೆಯುವ ಸರ್ಕಾರದ ಯೋಜನೆಗಳ ವಿವರ ನೀಡಿದರು.