ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸಿ ಕಲಿಯಿರಿ; ಹಠದಿಂದ ಮುನ್ನಡೆಯಿರಿ

ಪ್ರಜಾವಾಣಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
Published 7 ಮಾರ್ಚ್ 2024, 5:18 IST
Last Updated 7 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ತುಮಕೂರು: ಮಕ್ಕಳು ಬಾಹ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ, ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಹೊರಗಿನ ಪ್ರಪಂಚದಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಎಲ್ಲವನ್ನು ಅರಿತು ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸಲಹೆ ಮಾಡಿದರು.

ನಗರದಲ್ಲಿ ಬುಧವಾರ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಾಗಾರ, ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾಭ್ಯಾಸ ಮುಗಿಸಿ, ಉನ್ನತ ಹುದ್ದೆ ಪಡೆದ ತಕ್ಷಣ ಸಾಧನೆ ಮಾಡಿದ್ದೇವೆ ಎಂದಲ್ಲ. ಈ ಜೀವನ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳುವ ಒಂದು ಪಯಣ. ಎಸ್ಸೆಸ್ಸೆಲ್ಸಿ, ಪಿಯುಸಿ ಶಿಕ್ಷಣವು ಉನ್ನತ ಹುದ್ದೆ, ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುವ ಮೆಟ್ಟಿಲುಗಳು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿ, ಸದೃಢ ಶಕ್ತಿಯಾಗಿ ಬೆಳೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಪ್ರತಿ ಮಗು ಸಾಧನೆ ಮಾಡಬೇಕು. ಸಮಾಜದ ಆಸ್ತಿಯಾಗಬೇಕು. ಮೌಲ್ಯಯುತ ಜೀವನ ನಡೆಸಬೇಕು ಎಂಬುವುದು ಪ್ರತಿಯೊಬ್ಬ ತಂದೆ-ತಾಯಿಯ ಕನಸಾಗಿರುತ್ತದೆ. ಮಕ್ಕಳು ಇದನ್ನು ನನಸು ಮಾಡಬೇಕು ಎಂದರು.

ನಮಗೆ ನಾವೇ ಪ್ರೇರಣೆಯಾಗಬೇಕು. ಕಲಿಯುವ ಉತ್ಸಾಹ, ಅದಮ್ಯ ಚೇತನ ಬರಬೇಕು. ಎಲ್ಲ ವಿಷಯಗಳನ್ನು ಪ್ರೀತಿಯಿಂದ ಕಲಿಯಬೇಕು. ಪ್ರೀತಿ, ಆತ್ಮವಿಶ್ವಾಸ, ಹಠದಿಂದ ಮುನ್ನಡೆದರೆ ಗುರಿ ಮುಟ್ಟುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರು.

ಜೀವನದ ಪಯಣವನ್ನು ಒಂದು ಕ್ರೀಡೆ ಎಂದು ಭಾವಿಸಿ. ನಿರಂತರ ಪರಿಶ್ರಮ, ಅಭ್ಯಾಸ, ಉತ್ಸಾಹ, ಛಲ, ಹಠದಿಂದ ಮುಂದೆ ಸಾಗಬೇಕು. ಈ ಎಲ್ಲ ಅಂಶಗಳು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತವೆ ಎಂದು ತಿಳಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು,‌ ‘ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತುಮಕೂರು ರಾಜ್ಯಕ್ಕೆ 18ನೇ ಸ್ಥಾನ ಪಡೆದಿತ್ತು. ಈ ಬಾರಿ ಅದರಲ್ಲಿ ಎಂಟನ್ನು ತೆಗೆದು ಒಂದನೇ ಸ್ಥಾನಕ್ಕೆ ಬರಬೇಕು ಎಂಬುವುದು ನಮ್ಮ ಉದ್ದೇಶ. ಅದಕ್ಕಾಗಿ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳು ಪರೀಕ್ಷಾ ದಿನದ ವರೆಗೆ ಎಚ್ಚರವಾಗಿರಬೇಕು. ಸದಾ ಕಲಿಕೆಯಲ್ಲಿ ತೊಡಗಿಸಿ ಕೊಂಡಿರಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುತ್ತೇನೆ ಎಂಬುವುದನ್ನು ಇವತ್ತೇ, ಇಲ್ಲಿಂದಲೇ ತೀರ್ಮಾನ ಮಾಡಿ’ ಎಂದು ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬಿದರು.

 ಡಿಡಿಪಿಐ ಸಿ.ರಂಗಧಾಮಯ್ಯ, ಬಿಇಒ ಸೂರ್ಯಕಲಾ, ಟಿಪಿಎಂಎಲ್‌ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ್‌ ಜೋಯಿಸ್‌ ಹಾಜರಿದ್ದರು.

ತುಮಕೂರಿನಲ್ಲಿ ಬುಧವಾರ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿದರು
ತುಮಕೂರಿನಲ್ಲಿ ಬುಧವಾರ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿದರು
ತುಮಕೂರಿನಲ್ಲಿ ಬುಧವಾರ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ತುಮಕೂರಿನಲ್ಲಿ ಬುಧವಾರ ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ಭಾಗವಹಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ತುಮಕೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳು ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಪ್ರದರ್ಶಿಸಿದರು
ತುಮಕೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರೇರಣಾ ಶಿಬಿರದಲ್ಲಿ ವಿದ್ಯಾರ್ಥಿಗಳು ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಪ್ರದರ್ಶಿಸಿದರು

ಜನರ ಮನ ತಲುಪಿದ ‘ಪ್ರಜಾವಾಣಿ’ ‘

ಪ್ರಜಾವಾಣಿ’ ಪತ್ರಿಕೆ ಜನಪರ ಕಾಳಜಿ ಬದ್ಧತೆಯಿಂದ ಎಲ್ಲರ ಮನೆ ಮಾತಾಗಿದೆ. ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪತ್ರಿಕಾ ರಂಗ ಹೊರೆತುಪಡಿಸಿಯೂ ಸಾಮಾಜಿಕ ಕಳಕಳಿ ಹೊಂದಿರುವ ಪತ್ರಿಕೆಯಾಗಿ ಹೊರಹೊಮ್ಮಿದೆ’ ಎಂದು ಸಿಇಒ ಜಿ.ಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಇವತ್ತಿಗೂ ತನ್ನ ವಿಶ್ವಾಸ ಉಳಿಸಿಕೊಂಡಿದೆ. ಮಾನವ ಸಂಪನ್ಮೂಲದಿಂದ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ‘ಪ್ರಜಾವಾಣಿ’ ಇದರ ಮಹತ್ವವನ್ನು ಅರಿತುಕೊಂಡು ಮಕ್ಕಳಿಗಾಗಿ ಪ್ರೇರಣಾ ಶಿಬಿರ ಏರ್ಪಡಿಸಿರುವುದು ನಮ್ಮ ಮಕ್ಕಳ ಅದೃಷ್ಟ. ಇದು ಅತ್ಯಂತ ಮೌಲ್ಯಯುತವಾದ ಕಾರ್ಯಾಗಾರ ಎಂದರು.

- ಕಠಿಣ ಪರಿಶ್ರಮ ಮುಖ್ಯ

‘ಸಕಾರಾತ್ಮಕ ಮನೋಭಾವ ಆತ್ಮವಿಶ್ವಾಸ ಕಠಿಣ ಪರಿಶ್ರಮದಿಂದ ಅಭ್ಯಾಸದಲ್ಲಿ‌ ತೊಡಗಿಸಿಕೊಂಡರೆ ಯಾವ ಸಾಧನೆಯೂ ಅಸಾಧ್ಯವಲ್ಲ. ಪ್ರತಿ ಕ್ಷಣ ತುಂಬಾ ಮುಖ್ಯ. ಸಮಯ ವ್ಯರ್ಥ ಮಾಡಬಾರದು. ಎಲ್ಲರು ಪ್ರಾಮಾಣಿಕವಾಗಿ ಓದಬೇಕು. ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸಲಹೆ ಮಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜೀವನ ಬದಲಾವಣೆಯ ಹಂತ. ಎಲ್ಲರು ಉತ್ತಮವಾಗಿ ಪರೀಕ್ಷೆ ಬರೆದು ಒಳ್ಳೆಯ ನಾಗರಿಕರಾಗಿ ರೂಪುಗೊಳ್ಳಬೇಕು. ದೇಶದಲ್ಲಿ ಸುಮಾರು ಜನ ಹೆಣ್ಣು ಮಕ್ಕಳಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ. ಇಲ್ಲಿರುವ ಎಲ್ಲರಿಗೂ ಅವಕಾಶ ಕಲ್ಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

‘ಅನುಭಾತ್ಮಕ‌ ಕಲಿಕೆ’

ಜಾರಿ ಒಂದು ವಿಷಯವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಇದೇ ಉದ್ದೇಶದಿಂದ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ ಮುಂದಿನ ವರ್ಷದಿಂದ ‘ಅನುಭವಾತ್ಮಕ ಕಲಿಕೆ’ ಜಾರಿಗೆ ಮುಂದಾಗಿದೆ ಎಂದು ಜಿ.ಪಂ ಸಿಇಒ‌ ಜಿ.ಪ್ರಭು ತಿಳಿಸಿದರು. ಪ್ರತಿ ಪಾಠದ ಬಗ್ಗೆ ಪ್ರಾಯೋಗಿಕವಾಗಿ‌ ತಿಳಿಸಿಕೊಡುವ ಕೆಲಸವಾಗುತ್ತದೆ. 4ರಿಂದ 10ನೇ ತರಗತಿ‌ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ವರ್ಷಕ್ಕೆ 40 ಸಾವಿರದಿಂದ 50 ಸಾವಿರ ‘ಕ್ಷೇತ್ರ ಭೇಟಿ’ ಮಾಡಲು ತಯಾರಿ ನಡೆಯುತ್ತಿದೆ ಎಂದರು. ಭಯ ಎಂಬುದು ವಿದ್ಯಾರ್ಥಿಗಳ ಅತಿದೊಡ್ಡ ಶತ್ರು. ಎಲ್ಲರು ಆತಂಕ ಭಯ ಬಿಟ್ಟು ಪರೀಕ್ಷೆ ಬರೆಯಬೇಕು. ಒಮ್ಮೆ ಓದಿದ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಬೇಕು.‌ ಇದರಿಂದ ಓದಿದ ವಿಷಯ ಜ್ಞಾಪಕದಲ್ಲಿ ಉಳಿಯುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT