ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿಯ ಪರಮೇಶ್ವರಯ್ಯ ಹಾಗೂ ಮಹಾಲಿಂಗಯ್ಯ ಅವರಿಗೆ ಸೇರಿದ ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಕಡಿದು ಹಾಕಿದ್ದಾರೆ.
‘ದಾರಿ ವಿಚಾರವಾಗಿ ಈ ಹಿಂದೆ ಜಗಳವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲು ಏರಲಾಗಿತ್ತು. ಈ ಹಿನ್ನೆಲೆಯಲ್ಲಿ ಜಗದೀಶ್ ಮತ್ತು ಮಹದೇವಯ್ಯ ಹಾಗೂ ಇತರರು ಮೂರು ವರ್ಷದ 50 ಅಡಿಕೆ ಸಸಿಗಳನ್ನು ಕೊಚ್ಚಿ ಹಾಕಿದ್ದಾರೆ’ ಎಂದು ಪರಮೇಶಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅನ್ಯಾಯವಾಗಿದ್ದರೆ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಿ. ಅದನ್ನು ಬಿಟ್ಟು ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಸಸಿಗಳನ್ನು ಕೊಚ್ಚಿ ದೌರ್ಜನ್ಯ ಮೆರೆದಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಮಹಾಲಿಂಗಯ್ಯ ಹೇಳಿದರು.
ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.