ತುಮಕೂರು: ‘ಉಪಚುನಾವಣೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಎಲ್ಲ ಸಮುದಾಯದ ಜನರು ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಇನ್ನು ಮುಂದೆ ಮನೆಯಲ್ಲಿಯೇ ಇರಲಿ ಎಂದು ಜನರು ಮುಖಭಂಗ ಮಾಡಿದ್ದಾರೆ’ ಎಂದರು.
ಸಿದ್ದರಾಮಯ್ಯ ಜಾತಿಗಳನ್ನು ವಿಭಜಿಸಿದರು. ಆ ಮೂಲಕ ಕನಕದಾಸರಿಗೆ ಅವಮಾನ ಮಾಡಿದರು. ಈ ಕಾರಣದಿಂದ ಜನರು ಅವರಿಗೆ ಪಾಠ ಕಲಿಸಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರು. ಇವರೇ ಜೈಲಿಗೆ ಕಳುಹಿಸಿದ್ದು. ಈಗ ಜನರು ಉಪಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪರ ತೀರ್ಪು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮರ್ಯಾದೆ ಇದ್ದರೆ ತಕ್ಷಣ ಯಡಿಯೂರಪ್ಪ ಅವರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಮಾಧುಸ್ವಾಮಿ ಬಿಜೆಪಿಯ ಆಧಾರದ ಕಂಬಗಳಲ್ಲಿ ಒಬ್ಬರು ಎಂದು ಪ್ರಶಂಸಿಸಿದರು.