ತುಮಕೂರು:‘ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಂಗಳಿಗೆ ಒಮ್ಮೆಯಾದರೂ ತುಮಕೂರಿಗೆ ಬರ್ಲಪ್ಪ! ಇದರಿಂದ ರಸ್ತೆಗಳು ಸರಿ ಆಗುತ್ತವೆ’ ಹೀಗೆ ಆಸೆ ವ್ಯಕ್ತಪಡಿಸುತ್ತಿದ್ದಾರೆ ತುಮಕೂರು ನಾಗರಿಕರು.
ನರೇಂದ್ರ ಮೋದಿ ಜ.2ರಂದು ನಗರಕ್ಕೆ ಭೇಟಿ ನೀಡುತ್ತಿರುವ ಪ್ರಯುಕ್ತ ಗುಂಡಿ ಮತ್ತು ದೂಳುಮಯವಾಗಿದ್ದ ಬಿ.ಎಚ್.ರಸ್ತೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಿದೆ. ಬಿ.ಎಚ್.ರಸ್ತೆ ಕೂಡುವ ಹಾದಿಗಳ ಚಹರೆಗಳು ಸಹ ಬದಲಾಗುತ್ತಿವೆ.
ಸ್ಮಾರ್ಟ್ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಬಹುತೇಕ ರಸ್ತೆಗಳು ಅಧ್ವಾನವಾಗಿವೆ. ದೂಳಿನಿಂದ ನಾಗರಿಕರು ಹೈರಾಣಾಗಿದ್ದಾರೆ.
ಬಿ.ಎಚ್.ರಸ್ತೆಯಲ್ಲಿ ಡಾಂಬರು ಹಾಕುವ ಕಾಮಗಾರಿ
ಈಗ ಪ್ರಧಾನಿ ಬರುವ ಕಾರಣಕ್ಕೆ ಒಂದು ವಾರದಲ್ಲಿಯೇ ಬಿ.ಎಚ್.ರಸ್ತೆಯ ಚಿತ್ರಣ ಬದಲಾಗಿದೆ. ಏರ್ ಕಂಪ್ರೆಸ್ಸರ್ನಿಂದ ರಸ್ತೆಯ ದೂಳು ತೆಗೆಯಲಾಗಿದೆ. ಹಗಲಿರುಳು ಕೆಲಸಗಳು ನಡೆಯುತ್ತಿವೆ. ಈ ದಿಢೀರ್ ಬದಲಾವಣೆಯ ಚಿತ್ರಣ ನಾಗರಿಕರಲ್ಲಿ ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಗಿದೆ.
‘ಪ್ರಧಾನಿ ಪದೇ ಪದೇ ಭೇಟಿ ನೀಡುತ್ತಿದ್ದರೆ ನಗರ ಸ್ವಚ್ಛವಾಗಿರುತ್ತದೆ. ಮೋದಿ ಅವರು ಒಮ್ಮೆ ನಗರದ ಎಲ್ಲೆಡೆ ಸುತ್ತಬೇಕು. ಆಗ ಕೆಲಸಗಳು ಬೇಗ ಆಗುತ್ತವೆ. ದೂಳಿನಿಂದ ಮುಕ್ತಿ ಸಿಗುತ್ತದೆ’ ಎಂದು ನಾಗರಿಕರು ನುಡಿಯುತ್ತಿದ್ದಾರೆ.
ಯುವ ಸಮುದಾಯ ಸಹ ಸಾಮಾಜಿಕ ಜಾಲತಾಣಗಳಲ್ಲಿ ‘ತಿಂಗಳಿಗೊಮ್ಮೆ ಮೋದಿ ಬರಲಿ’ ಎಂದು ಬರಹಗಳನ್ನು ಪ್ರಕಟಿಸುತ್ತಿದೆ.