ತುಮಕೂರು: ಒಣಕಸವನ್ನು ಸುಡುವ ಮೂಲಕ ವಿದ್ಯುತ್ ಉತ್ಪಾದನೆಯನ್ನು ಹೆಚ್ಚು ಮಾಡುವ ಅಗತ್ಯವಿದೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಸಲಹೆ ಮಾಡಿದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನರ್ಜಿ ಕ್ಲಬ್ ಹಾಗೂ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯನಿಯರ್ ವಿಭಾಗದಿಂದ ಈಚೆಗೆ ಹಮ್ಮಿಕೊಂಡಿದ್ದ ‘ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ’ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೋಲಾರ್, ಗಾಳಿಯ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಬಿಸಿ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಅಂತಹ ತಂತ್ರಜ್ಞಾನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ದಿನದಿಂದ ದಿನಕ್ಕೆ ವಿದ್ಯುತ್ ಬಳಕೆ ಹೆಚ್ಚುತ್ತಿದ್ದು, ಇದೇ ರೀತಿ ಬಳಕೆ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಇಂಧನ ಕೊರತೆ ಎದುರಾಗಲಿದೆ. ಇಂಧನ ಉಳಿತಾಯ ಮಾಡುವ ಸಲುವಾಗಿ ಉಜಾಲ ಯೋಜನೆಯಲ್ಲಿ ಮನೆಗಳಿಗೆ ಎಲ್ಇಡಿ ಬಲ್ಬ್ಗಳನ್ನು ನೀಡಲಾಗಿದೆ ಎಂದರು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಲ್.ಸಂಜೀವ್ ಕುಮಾರ್, ‘ಇಂಧನವನ್ನು ಮಿತವಾಗಿ ಬಳಸಿದರೆ ಮುಂದಿನ ದಿನಗಳಿಗೂ ಉಳಿತಾಯ ಮಾಡಬಹುದಾಗಿದೆ’ ಎಂದರು.
ಎಸ್ಎಸ್ಐಟಿ ಸಂಶೋಧನಾ ವಿಭಾಗದ ಸಂಯೋಜಕ ಎಸ್.ಜಿ.ಶ್ರೀಕಂಠೇಶ್ವರಸ್ವಾಮಿ, ಎನರ್ಜಿ ಕ್ಲಬ್ ಸಂಯೋಜಕರಾದ ಎನ್.ಪ್ರದೀಪ್, ಸಿ.ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.