ಪಾವಗಡ: ಜಾಮಿಯಾ ಮಸೀದಿ, ಶಿರಾ ರಸ್ತೆಯ ಮಜೀದ್– ಇ– ಆಜಮ್ ಸೇರಿದಂತೆ ತಾಲ್ಲೂಕಿನ ಮಸೀದಿಗಳಲ್ಲಿ ಶುಕ್ರವಾರ ಈದ್ ಮಿಲಾದ್ ಅನ್ನು ಸರಳವಾಗಿ ಆಚರಿಸಲಾಯಿತು.
ಕೋವಿಡ್– 19 ಕಾರಣ ಚಾಂದಿನಿ ಮೆರವಣಿಗೆ ಮಾಡದೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿ ಬಳಿ ಧ್ವಜಾರೋಹಣ ನೆರವೇರಿಸಿ ಪ್ರವಚನ ಮಾಡಲಾಯಿತು.
ರಕ್ತ ದಾನ ಶಿಬಿರ: ಪಟ್ಟಣದ ಜಾಮಿಯಾ ಮಸೀದಿ ಬಳಿ ಈದ್ ಮಿಲಾದ್ ಪ್ರಯುಕ್ತ ಜಾಮಿಯಾ ಮಸೀದಿ, ನವ್ ಜವಾನ್ ಸಮಿತಿ ಸಹಯೋಗದೊಂದಿಗೆ ರಕ್ತ ದಾನ ಶಿಬಿರ ಹಮ್ಮಿಕೊಂಡಿತ್ತು. 80ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.
ಪುರಸಭೆ ಸದಸ್ಯ ಎಂಎಜಿ ಇಮ್ರಾನ್, ‘ಕೋವಿಡ್ 19 ತುರ್ತು ಸಂದರ್ಭದಲ್ಲಿ ರಕ್ತ ಸಿಗುವುದು ಕಷ್ಟವಾಗಿದೆ. ಹೀಗಾಗಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಸುಮಾರು 80 ಮಂದಿ ರಕ್ತ ದಾನ ಮಾಡಿದ್ದಾರೆ. ಶನಿವಾರ ಬಡ ಜೋಡಿಗಳಿಗೆ ಉಚಿತ ವಿವಾಹ ಮಾಡಲಾಗುವುದು. ವಿವಾಹಿತ ಜೋಡಿಗೆ ಅಗತ್ಯ ಪೀಠೋಪಕರಣ, ಪಡಿತರ, ಪಾತ್ರೆ ಸಾಮಗ್ರಿ ಕೊಡಲಾಗುವುದು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಟಿ.ಖಾನ್, ಹಲವು ವರ್ಷಗಳಿಂದ ಅದ್ದೂರಿಯಾಗಿ ಚಾಂದಿನಿ ಮೆರವಣಿಗೆ ಮಾಡಲಾಗುತ್ತಿತ್ತು. ಸರ್ಕಾರದ ಆದೇಶದಂತೆ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಮಸೀದ್ ಇ ಆಜಂ ಮಸೀದಿ ಮುಖಂಡ ಯೂನಿಸ್, ದೇಶದಲ್ಲಿ ಕೋವಿಡ್ 19 ನಿವಾರಣೆಯಾಗಲಿ ಎಂದು ಶ್ರದ್ಧೆಯಿಂದ ಪ್ರಾರ್ಥಿಸಲಾಗಿದೆ ಎಂದರು.