ತುಮಕೂರು: ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಮೂವರು ಅಪರಾಧಿಗಳಿಗೆ ಪೋಕ್ಸೊ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ₹2 ಲಕ್ಷ ದಂಡ ವಿಧಿಸಿದೆ.
ರಾಮಚಂದ್ರಯ್ಯ (55), ಹೊಸವಿರಾಮಯ್ಯ (60) ಮತ್ತು ವೆಂಕಟೇಶಯ್ಯ (40) ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಗರ್ಭ ಧರಿಸುವುದು ತಿಳಿದು ಬಂದಿತ್ತು. ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯಲ್ಲಿ ಬಾಲಕಿ ಒಬ್ಬಳೇ ಇರುವಾಗ ರಾಮಚಂದ್ರಯ್ಯ ಆಕೆಯನ್ನು ತಿಂಡಿ ತಿನ್ನಲು ಹಣ ಕೊಡುತ್ತೇನೆ ಎಂದು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದನ್ನು ನೋಡಿದ ಹೊಸವಿರಾಮಯ್ಯ ಊರಿನ ಜನರಿಗೆ ತಿಳಿಸುವುದಾಗಿ ಬಾಲಕಿಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ. ಇದನ್ನು ಗಮನಿಸಿದ ಮತ್ತೊಬ್ಬ ಅಪರಾಧಿ ವೆಂಕಟೇಶಯ್ಯ ಸಹ ಲೈಂಗಿಕ ದೌರ್ಜನ್ಯ ವೆಸಗಿದ್ದರು.
ಹುಲಿಯೂರುದುರ್ಗದ ತನಿಖಾಧಿಕಾರಿ ಎ.ಎನ್.ಅಶೋಕ್ಕುಮಾರ್ ಪ್ರಕರಣದ ತನಿಖೆ ನಡೆಸಿದಾಗ ಈ ಎಲ್ಲ ವಿಷಯಗಳು ಗೊತ್ತಾಗಿವೆ. ಸದರಿ ಪ್ರಕರಣದ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದೆ. ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹4 ಲಕ್ಷ ಸೇರಿ ಒಟ್ಟು ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಸರ್ಕಾರದ ಪರವಾಗಿ ಕೆ.ಎಸ್.ಆಶಾ ವಾದ ಮಂಡಿಸಿದ್ದರು.