ತುಮಕೂರು: ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು, ಈಗ ಮತ್ತೆ ಅವುಗಳನ್ನು ಜಾರಿಗೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ನಗರದ ಗಾಜಿನಮನೆಯಲ್ಲಿ ಭಾನುವಾರ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸಮುದಾಯದ ನೂತನ ಸಚಿವರು, ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕವಾದ ಸಚಿವಾಲಯ, ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ತುಂಬಾ ದಿನಗಳಿಂದ ಬೇಡಿಕೆ ಇದೆ. ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ, ಸಮುದಾಯದ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಎಲ್ಲ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ವಿದ್ಯಾರ್ಥಿ ವೇತನ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಹಲವು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಅವುಗಳನ್ನು ಮರು ಜಾರಿಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ, ಉದ್ಯಮ ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಸಮುದಾಯದ ಜನರು ಮುಂದೆ ಬರಬೇಕು. ವಾಲ್ಮೀಕಿ ನಾಯಕ ಸಮುದಾಯ ಬಹಳ ದಾರಿ ತಪ್ಪಿ ಹೋಗಿತ್ತು, ಈಗ ಸರಿ ಹಾದಿಗೆ ಬಂದಿದೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ, ‘ಅಹಿಂದ ಸಮುದಾಯಗಳು ಒಗ್ಗೂಡಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಗಳಿಸಲು ಸಾಧ್ಯ. ಅನರ್ಹರು ನಕಲಿ ಜಾತಿ ಪ್ರಮಾಣ ಪಡೆಯುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಸರ್ಕಾರದಿಂದ ಆಗಬೇಕಿದೆ’ ಎಂದರು.
ಕಾಂಗ್ರೆಸ್ ಸರ್ಕಾರ ಸಮುದಾಯದ 3 ಜನ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದೆ. ರಾಜನಹಳ್ಳಿ ಮಠದಲ್ಲಿ ವಿದ್ಯಾಭ್ಯಾಸ ಕೊಡುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ಕೆಲಸವಾಗಬೇಕು. ಸಮಾಜದ ಜನರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ಸಲಹೆ ಮಾಡಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಶಾಸಕರಾದ ಡಾ.ಎನ್.ಟಿ. ಶ್ರೀನಿವಾಸ್, ಬಿ.ದೇವೇಂದ್ರಪ್ಪ, ಕರೆಮ್ಮ ಜಿ.ನಾಯಕ, ಪಾಲಿಕೆ ಸದಸ್ಯ ಬಿ.ಜಿ. ಕೃಷ್ಣಪ್ಪ, ಮುಖಂಡರಾದ ಶಾಂತಲಾ ರಾಜಣ್ಣ, ವಿ.ಎನ್. ಮೂರ್ತಿ ಮಾತನಾಡಿದರು. ಮುಖಂಡರಾದ ಎಚ್.ಜಿ. ಪುರುಷೋತ್ತಮ, ಲಕ್ಷ್ಮಿನಾರಾಯಣ, ಮೃತ್ಯುಂಜಯ, ದಯಾನಂದ, ಭೀಮಣ್ಣ, ಸಿಂಗದಹಳ್ಳಿ ರಾಜಕುಮಾರ್, ಬಸವರಾಜ್, ರಂಗಸ್ವಾಮಯ್ಯ, ಮಂಜುನಾಥ್, ಓಬಳರಾಜು ಇತರರು ಉಪಸ್ಥಿತರಿದ್ದರು.
ಸರ್ಕಾರದಿಂದ ನಿಡಗಲ್ ಉತ್ಸವ ಆಚರಿಸಿ ‘ಪಾವಗಡ ತಾಲ್ಲೂಕಿನ ನಿಡಗಲ್ ಉತ್ಸವವನ್ನು ಸರ್ಕಾರದ ಉತ್ಸವವಾಗಿ ಆಚರಣೆ ಮಾಡಬೇಕು’ ಎಂದು ಶಿರಾ ತಾಲ್ಲೂಕಿನ ಶಿಡ್ಲಕೋಣ ವಾಲ್ಮೀಕಿ ಶಾಖಾ ಮಠದ ಸಂಜಯಕುಮಾರ ಸ್ವಾಮೀಜಿ ಒತ್ತಾಯಿಸಿದರು. ಶ್ರಾವಣ ಮಾಸದ ಕೊನೆಯ ದಿನ ಉತ್ಸವ ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಿತ್ತೂರು ಉತ್ಸವದಂತೆ ನಿಡಗಲ್ ಉತ್ಸವವನ್ನು ಸರ್ಕಾರದಿಂದ ಆಚರಿಸಬೇಕು. ಶಾಸಕರು ಮಂತ್ರಿಗಳು ಜನಾಂಗದ ಅಭಿವೃದ್ಧಿ ಮಾಡಬೇಕು. ನಮ್ಮ ಗುರಿ ತಲುಪಲು ಎಲ್ಲರು ಒಗ್ಗಟ್ಟಾಗಿರಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.