ವೈ.ಎನ್.ಹೊಸಕೋಟೆ: ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕೆಲವರಿಗೆ ಪೊಲೀಸ್ ಇಲಾಖೆ ಶನಿವಾರ ತಿಳುವಳಿಕೆ ನೋಟಿಸ್ ಜಾರಿ ಮಾಡಿದೆ.
ಅಂಬೇಡ್ಕರ್ ನಗರದಲ್ಲಿ ಅಕ್ರಮ ಮಧ್ಯಮಾರಾಟ ಮಾಡುತ್ತಿರುವ ವಿಚಾರ ಮೇಲಧಿಕಾರಿಗಳಿಗೆ ದೂರು ಹೋಗಿರುವ ಹಿನ್ನೆಲೆಯಲ್ಲಿ ಪಿಎಸ್ಐ ಜಯರಾಂ ಮಾರಮ್ಮ ದೇವಾಲಯದ ಬಳಿ ಸಾರ್ವಜನಿಕ ಕಾನೂನು ಅರಿವು ಮತ್ತು ಜಾಗೃತಿ ಸಭೆ ನಡೆಸಿ ತಿಳುವಳಿಕೆ ನೀಡಿದರು.
ಈಗಾಗಲೇ ಮದ್ಯ ಮಾರಾಟದ ಬಗ್ಗೆ ಮಾಹಿತಿ ಬಂದಿದೆ. ಅವರನ್ನು ಪತ್ತೆ ಹಚ್ಚಿ ಲಿಖಿತವಾಗಿ ತಿಳುವಳಿಕೆ ನೀಡಿದ್ದೇವೆ. ಅವರು ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಲಾಗಿದೆ. ಆದಾಗ್ಯೂ ಅವರು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆಯಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದರು.
ಪೋಲೀಸ್ ಸಿಬ್ಬಂದಿ ಮಹಂತೇಶ್, ಸದ್ದಾಂ, ಗಂಗಮ್ಮ ಹಾಜರಿದ್ದರು.