ತುಮಕೂರು: ಯುವಕರನ್ನು ಸಂಘಟಿಸಿ ದೇಶ ಸೇವೆಗೆ ಅಣಿಗೊಳಿಸುವಂತಹ ವಾತಾವರಣ ಸೃಷ್ಟಿ ಆಗಬೇಕು ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮ್ಮದ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ‘ಸೇವಾದಳ ಯುವ ಬ್ರಿಗೇಡ್’ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ಅಹಿಂಸಾತ್ಮಕ ಚಳವಳಿ ಮೂಲಕ ಸೇವಾದಳ ಪ್ರಾರಂಭವಾಯಿತು. ಸೇವಾ ಮನೋಭಾವ ರೂಢಿಸಿಕೊಳ್ಳುವಂತೆ ಮಾಡುವುದೇ ದಳದ ಮುಖ್ಯ ಉದ್ದೇಶ ಎಂದರು.
ಪ್ರಧಾನಿ ನರೇಂದ್ರ ಮೋದಿ ಯಾವುದೇ ಚುನಾವಣೆ ಭರವಸೆ ಈಡೇರಿಸಿಲ್ಲ. ಕಳೆದ ಐದಾರು ತಿಂಗಳಿನಿಂದ 13 ಕೋಟಿಗೂ ಹೆಚ್ಚು ಜನರು ದೇಶದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಕನಿಷ್ಠ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸುವಲ್ಲಿ ಪ್ರಧಾನಿ ವಿಫಲ ಆಗಿದ್ದಾರೆ ಎಂದು ಆರೋಪಿಸಿದರು.
ಸೇವಾದಳದ ರಾಷ್ಟ್ರೀಯ ಸಂಚಾಲಕ ಕಿರಣ್ ಮೋರಸ್ ಮಾತನಾಡಿ, ಜನರಲ್ಲಿ ಸೇವಾ ಮನೋಭಾವ, ರಾಷ್ಟ್ರೀಯ ಮನೋಭಾವ ಕಡಿಮೆ ಆಗುತ್ತಿದೆ. ಸೇವಾದಳ ಘಟಕವು ಯುವಕರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸಹಕಾರ ಭಾವ ಮೂಡಿಸುವ ಮೂಲಕ ಅವರಲ್ಲಿ ರಾಷ್ಟ್ರಪ್ರೇಮ ಮೂಡಿಸಬೇಕು ಎಂದು ಹೇಳಿದರು.
ಸೇವಾದಳ ಯುವ ಬ್ರಿಗೇಡ್ ರಾಜ್ಯ ಘಟಕದ ಅಧ್ಯಕ್ಷ ಪಿ.ಕೆ.ಜುನೈದ್, ಸೇವಾ ಮನೋಭಾವದಿಂದ ಎಲ್ಲರೂ ಕೆಲಸ ಮಾಡಲು ಮುಂದಾಗಬೇಕು. ಸೇವಾದಳವು ನಿಸ್ವಾರ್ಥ ಸೇವಾ ಸಂಘಟನೆ ಆಗಿದೆ ಎಂದು ಹೇಳಿದರು.
ನಿಖಿತ್ ರಾಜ್ ಮೌರ್ಯ ಮಾತನಾಡಿ, ಜಾತಿ ಭಾವನೆ ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರೀಯತೆಯನ್ನು ಮೂಡಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಸೇವಾದಳ ಯುವ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷ ಮಧು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈನ್ ಶೇಖ್ ಫಯಾಜ್ ಉಪಸ್ಥಿತರಿದ್ದರು.